ಶ್ರೀ ಸಾಧ್ವಿ ಶಿರೋಮಣಿ ತುರಡಗಿ ತಿಮ್ಮಮ್ಮನವರ 212ನೇ ಆರಾಧನಾ ಮಹೋತ್ಸವ ಹರಿದು ಬಂತು ಭಕ್ತ ಸಾಗರ

ಕುಷ್ಟಗಿ: ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಕಿಡದೂರು ಸೀಮಾ ವ್ಯಾಪ್ತಿಯ ಶ್ರೀ ಕ್ಷೇತ್ರ ಅಮ್ಮನಕಟ್ಟಿಯ ಶ್ರೀ ಸಾಧ್ವಿ ಶಿರೋಮಣಿ ತಿಮ್ಮಮ್ಮನವರ 212ನೇ ಆರಾಧನಾ ಮಹೋತ್ಸವ ಅಪಾರ ಭಕ್ತಾದಿಗಳ ಮಧ್ಯೆ ಭಕ್ತಿಯಿಂದ ಜರುಗಿತು.
ಗುರುವಾರದಂದು ಅಮ್ಮನವರ ಬೃಂದಾವನಕ್ಕೆ ಪಂಚಾಮೃತ ಅಭಿಷೇಕ.ಸಾಮೂಹಿಕ ಜವಳ, ಹರಿನಾಮ ಕೀರ್ತನೆ.ಸೇರಿದಂತೆ ಸಕಲ ವಾದ್ಯ ವೈಭವದೊಂದಿಗೆ ಹೂನೂರು ಗ್ರಾಮದ ಮೂಲಕ. ಶ್ರೀ ಕ್ಷೇತ್ರ ಅಮ್ಮನ ಕಟ್ಟೆಗೆ ಅಮ್ಮನವರ ಪಲ್ಲಕ್ಕಿ ಮಹೋತ್ಸವ ಆಗಮಿಸಿತು.
ಈ ಸಂದರ್ಭದಲ್ಲಿ ಭಕ್ತಾದಿಗಳು ತಮ್ಮ ಇಷ್ಟಾರ್ಥಗಳ ಈಡೇರಿಕೆಗಾಗಿ. ದೀಡು ನಮಸ್ಕಾರ ಹಾಕುವುದರ ಮೂಲಕ ಹರಕೆ ಸಲ್ಲಿಸಿದರು.
ಲೋಕಕಲ್ಯಾಣಾರ್ಥಕವಾಗಿ ಲಕ್ಷ್ಮೀನಾರಾಯಣ ಹೃದಯ ಮಂತ್ರ, ಹೋಮ. ರಾಘವೇಂದ್ರ ಆಚಾರ್ ಜೋಶಿ ತಂಡದವರು ನೆರವೇರಿಸಿದರು.
ಇದೇ ಸಂದರ್ಭದಲ್ಲಿ ಹುಣಸಿಹೊಳೆ ಅನ್ನುವ ಮಠದ ಪೀಠಾಧಿಕಾರಿಗಳಾದ ವಿದ್ಯಾ ಕಣ್ವವಿರಾಜತೀರ್ಥ ಶ್ರೀಪಾದಂಗಳವ ದಿವ್ಯಸಾನಿಧ್ಯದಲ್ಲಿ ತಪ್ತ ಮುದ್ರಾಧಾರಣೆ ವೇದಿಕೆ ಕಾರ್ಯಕ್ರಮ ಜರಗಿತು.
ರಾಜ್ಯದ ನಾನಾ ಭಾಗಗಳಿಂದ ಭಕ್ತರು ಪಾಲ್ಗೊಂಡಿದ್ದರು.

೭ನೇ ವೇತನ ಆಯೋಗದ ಅನುಷ್ಠಾನದಲ್ಲಿ ನಿವೃತ್ತ ನೌಕರರಿಗೆ ತಾರತಮ್ಯ: ಪರಮಾನಂದ ಶಿವಸಿಂಪರ್

ಗಂಗಾವತಿ: ೧ನೇ ಜುಲೈ ೨೦೨೨ ರಿಂದ ೩೧ನೇ ಜುಲೈ ೨೦೨೪ರ ಅವಧಿಯಲ್ಲಿ ೨೫ ತಿಂಗಳು ಸೇವೆ ಸಲ್ಲಿಸಿ ನಿವೃತ್ತರಾದ ನೌಕರರಿಗೆ ೭ನೇ ವೇತನ ಆಯೋಗದ ಅನುಷ್ಟಾನದಲ್ಲಿ ನಿವೃತ್ತಿ ಉಪಲಬ್ಧಗಳನ್ನು ಪಾವತಿಸುವ ಸಂದರ್ಭದಲ್ಲಿ ಆರ್ಥಿಕ ನಷ್ಟವಾಗಿರುತ್ತದೆ ಎಂದು ಕರ್ನಾಟಕ ನಿವೃತ್ತ ನೌಕರರ ವೇದಿಕೆಯ ಕಲ್ಯಾಣ ಕರ್ನಾಟಕ ವಿಭಾಗ ಸಂಚಾಲಕರಾದ ಪರಮಾನಂದ ಶಿವಸಿಂಪರ್ ಅವರು ಕಳವಳ ವ್ಯಕ್ತಪಡಿಸಿದರು.

ಅವರು ಇಂದು ಸದರಿ ಅವಧಿಯಲ್ಲಿ ನಿವೃತ್ತರಾದ ನೌಕರರಿಗೆ ಆದ ಅನ್ಯಾಯ ಸರಿಪಡಿಸಲು ಒತ್ತಾಯಿಸಿ ತಹಶೀಲ್ದಾರರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಮಾತನಾಡಿದರು. ಪ್ರಸ್ತುತ ಸೇವೆಯಲ್ಲಿರುವ ಅಧಿಕಾರಿ ನೌಕರರಂತೆ ನಾವು ಜುಲೈ-೨೦೨೨ ರಿಂದಲೇ ಪಡೆಯಬೇಕಿದ್ದ ನಿವೃತ್ತಿ ವೇತನದ ವ್ಯತ್ಯಾಸವನ್ನು ಕೇಳುತ್ತಿರುವದಿಲ್ಲ, ಬದಲಾಗಿ ನಾವು ಹೇಳುತ್ತಿರುವುದು ೭ನೇ ವೇತನ ಆಯೋಗದ ವರದಿಯಂತೆ ಪರಿಷ್ಕೃತ ವೇತನದ ಮೇಲೆ ನಿವೃತ್ತಿ ಆರ್ಥಿಕ ಸೌಲಭ್ಯಗಳಾದ ಡಿ.ಸಿ.ಆರ್.ಜಿ, ಕಮ್ಯುಟೇಶನ್ ಹಾಗೂ ಗಳಿಕೆ ರಜೆ ನಗದೀಕರಣ ಸೌಲಭ್ಯಗಳ ಲೆಕ್ಕಾಚಾರದ ವ್ಯತ್ಯಾಸದ ಮೊತ್ತವನ್ನು ಮಾತ್ರ ಕೊಡಬೇಕೆಂದು ಕೇಳುತ್ತಿದ್ದೇವೆ. ಈ ನಮ್ಮ ಬೇಡಿಕೆ ಕುರಿತು ನಾವುಗಳು ಈಗಾಗಲೇ ಬೆಳಗಾವಿಯಲ್ಲಿ ಜರುಗಿದ ಚಳಿಗಾಲದ ಅಧಿವೇಶನದ ಸಂದರ್ಭದಲ್ಲಿ ಸುವರ್ಣಸೌಧದ ಮುಂದೆ ಕಳೆದ ಡಿಸೆಂಬರ್-೧೦ ರಂದು ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಆಗಮಿಸಿದ್ದ ೨೦೦೦೦ ಕ್ಕೂ ಅಧಿಕ ನೌಕರರು ಸಮಾವೇಶಗೊಂಡ ಸಂದರ್ಭದಲ್ಲಿ ಲೋಕೋಪಯೋಗಿ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಜಾರಕಿಹೊಳಿಯವರು ಘನ ಸರಕಾರದ ವತಿಯಿಂದ ನಮ್ಮ ಮನವಿಯನ್ನು ಸ್ವೀಕರಿಸಿ, ಸಚಿವರೊಂದಿಗೆ ಆಗಮಿಸಿದ್ದ ಆರ್ಥಿಕ ಇಲಾಖೆಯ ಸರ್ಕಾರದ ಕಾರ್ಯದರ್ಶಿಗಳಾದ ಪಿ.ಸಿ. ಜಾಫರ್ ಅವರು ಅಧಿವೇಶನದ ನಂತರ ಬೆಂಗಳೂರಿನಲ್ಲಿ ತಮ್ಮ ಜೊತೆ ಸಭೆ ಆಯೋಜಿಸಿ ನಿಮ್ಮ ವೇದಿಕೆಯ ಮುಖಂಡರನ್ನು ಮಾತುಕತೆಗೆ ಆಹ್ವಾನಿಸುತ್ತೇವೆ, ಆಗ ತಾವು ಬಂದು ತಮ್ಮ ಆಹವಾಲು ಮಂಡಿಸಿರಿ ಎಂದು ತಿಳಿಸಿದ್ದರು. ಅಲ್ಲದೇ ಸಚಿವ ಸತೀಶ ಜಾರಕಿಹೊಳಿಯವರು ಮುಖ್ಯಮಂತ್ರಿಗಳನ್ನು ಸುವರ್ಣಸೌಧದಲ್ಲಿ ಭೇಟಿಯಾಗಲು ವ್ಯವಸ್ಥೆ ಮಾಡಿದಂತೆ ನಮ್ಮ ವೇದಿಕೆಯ ನಿಯೋಗವು ಡಿಸೆಂಬರ್-೧೬ ರಂದು ಚಳಿಗಾಲದ ಅಧಿವೇಶನದ ಸಂದರ್ಭದಲ್ಲಿ ಮುಖ್ಯಮಂತ್ರಿಗಳನ್ನು ಭೇಟಿಯಾದಾಗ, ಈ ಅಧಿವೇಶನದ ನಂತರ ಸಭೆ ಕರೆದು ಚರ್ಚಿಸಿ ನಿರ್ಧರಿಸೋಣ ಎಂದು ಹೇಳಿರುತ್ತಾರೆ. ಆದರೆ ಈವರೆಗೂ ಮುಖ್ಯಮಂತ್ರಿಗಳು ಸಭೆ ಏರ್ಪಾಡು ಮಾಡಿರುವುದಿಲ್ಲ. ಈ ನಮ್ಮ ಬೇಡಿಕೆ ಈಡೇರಿಕೆ ಬಗ್ಗೆ ಚರ್ಚಿಸಲು ಮುಖ್ಯಮಂತ್ರಿಗಳು ನಮ್ಮ ವೇದಿಕೆಯ ಮುಖಂಡರುಗಳೊಂದಿಗೆ ಒಂದು ವಾರದೊಳಗೆ ದಿನಾಂಕ ನಿಗದಿಗೊಳಿಸಿ ಒಂದು ಸಭೆ ಏರ್ಪಾಡು ಮಾಡಿ ನಮಗೆ ತಿಳಿಸಲು ಜನವರಿ-೩೦ ಮಹಾತ್ಮಾ ಗಾಂಧೀಜಿಯವರ ಪುಣ್ಯತಿಥಿ ಹುತಾತ್ಮರ ದಿನಾಚರಣೆ ಸಂದರ್ಭದಲ್ಲಿ ಗಂಗಾವತಿ ತಾಲೂಕ ದಂಡಾಧಿಕಾರಿಗಳ ಮುಖಾಂತರ ತಮಗೆ ನಮ್ಮ ಬೇಡಿಕೆ ಈಡೇರಿಸಲು ಆಗ್ರಹಿಸಿ ಈ ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ನಿವೃತ್ತ ನೌಕರರ ವೇದಿಕೆಯ ಗಂಗಾವತಿ ತಾಲೂಕ ಸಂಚಾಲಕರಾದ ಸುರೇಶ ಪತ್ತಾರ, ಪಂಚಾಕ್ಷರಯ್ಯ, ಎನ್. ಶಿವಪ್ರಸಾದ, ಪರಶುರಾಮ ಕುಷ್ಟಗಿ, ದೇವಪ್ಪ, ದೇವರಾಜ, ನಿರ್ಮಲಮ್ಮ, ಇಮಾಮಸಾಬ್ ಮನಿಯಾರ್, ಮಹಾಂತಗೌಡ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

11ನೇ ವರ್ಷದ ವಾಸವಿ ದೀಕ್ಷಾ ಮಾಲಾಧಾರಿಗಳಿಂದ ಕೊಲ್ಲಾಪುರ ಮಹಾಲಕ್ಷ್ಮಿದೇವಿ ದರ್ಶನಕ್ಕೆ ಯಾತ್ರೆ

ಗಂಗಾವತಿ: ಹಿರೇಜಂತಕಲ್ ವಿರುಪಾಪುರ ಆರ್ಯವೈಶ್ಯ ಸಮಾಜದ ವತಿಯಿಂದ ಶ್ರೀ ಕನ್ನಿಕಾ ಪರಮೇಶ್ವರಿ ದೇವಸ್ಥಾನದಿಂದ ಶ್ರೀ ಕೊಲ್ಲಾಪುರ ಮಹಾಲಕ್ಷ್ಮಿದೇವಿ ದರ್ಶನಕ್ಕೆ 11ನೇ ವರ್ಷದ ವಾಸವಿ ದೀಕ್ಷಾ ಮಾಲಾಧಾರಿಗಳಿಂದ ಪುಷ್ಯ ಮಹತ್ವದ ನಿಮಿತ್ತವಾಗಿ ಯಾತ್ರೆ ಕೈಗೊಳ್ಳಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಹಿರೇಜಂತಕಲ್ ವಿರುಪಾಪುರ ಆರ್ಯವೈಶ್ಯ ಸಮಾಜದ ಅಧ್ಯಕ್ಷರಾದ ದರೋಜಿ ನಾಗರಾಜ ಶ್ರೇಷ್ಠಿ ಪುಷ್ಪ ಮಾಸದ ನಿಮಿತ್ತವಾಗಿ ನಾವು 11ನೇ ವರ್ಷದ ಶ್ರೀ ಕೊಲ್ಲಾಪುರ ಮಹಾಲಕ್ಷ್ಮಿ ದೇವಸ್ಥಾನಕ್ಕೆ ವಾಸವಿ ದೀಕ್ಷಾ ಮಾಲಾಧಾರಿಗಳಿಂದ ಪ್ರತಿ ವರ್ಷದಂತೆ ಈ ವರ್ಷವೂ ಸುಮಾರು 26 ಜನ ವಾಸವಿ ದೀಕ್ಷಾ ಮಾಲದಾರಿಗಳು ಮತ್ತು ನವ ಬೃಂದಾವನ ಭಜನಾ ಮಂಡಳಿ ಸದಸ್ಯರು ಕೂಡಿ ಯಾತ್ರೆ ಕೈಗೊಂಡಿರುವುದು ವಿಶೇಷವಾಗಿದೆ. ಜೊತೆಗೆ ಆ ಕೊಲ್ಲಾಪುರ ಮಹಾಲಕ್ಷ್ಮಿ ದೇವಿ ಎಲ್ಲರಿಗೂ ಕೃಪೆ ತೋರಲಿ, ಆ ತಾಯಿಯ ಕರುಣೆ ಆಶೀರ್ವಾದ ಎಲ್ಲರ ಮೇಲಿರಲಿ. ಭೂಮಿ ಮೇಲಿರುವ ಯಾವ ಜೀವಿಗೂ ತೊಂದರೆಯಾಗದಂತೆ ಹಾರೈಸಲಿ ಎಂದು ಹೇಳಿದರು.

ಈ ಸಂದರ್ಭದಲ್ಲಿ ಬಾಗಲಕೋಟೆಯ ಮಾರ್ಗ ಮಧ್ಯದಲ್ಲಿ ಎಸ್ಆರ್ ಕೋರ ವಕೀಲರು ಮತ್ತು ವಾಸು ದೀಕ್ಷ ರಾಜ್ಯಾಧ್ಯಕ್ಷರು ಮಾತನಾಡಿ ಈ ಸಂದರ್ಭದಲ್ಲಿ ದೇಶಾದ್ಯಂತ ಆರ್ಯವೈಶ್ಯ ಸಮಾಜದ ಕುಲದೇವತೆಯಾದ ಶ್ರೀ ಕನ್ನಿಕಾಪರಮೇಶ್ವರಿಯಮ್ಮನವರು ಜನವರಿ-31ರಂದು ವಿಶ್ವರೂಪ ದರ್ಶನ ನೀಡಿದ ಅತ್ಯಂತ ಶುಭದಿನ. ಈ ಹಿನ್ನೆಲೆಯಲ್ಲಿ ಸಮಾಜ ಬಾಂಧವರು ಮಾಲಾಧಾರಿಗಳ ದಿಕ್ಷೆಯನ್ನು ಪಡೆದುಕೊಳ್ಳುವುದರ ಮೂಲಕ ದಿನಂಪ್ರತಿ ಅಮ್ಮನವರ ದೇವಸ್ಥಾನದಲ್ಲಿ ಹಾಗೂ ಆಸಕ್ತ ಮಾಲಧಾರಿಗಳ ನಿವಾಸದಲ್ಲಿ ವಿಶೇಷ ಪೂಜೆ ಭಜನೆ ನಡೆಸುತ್ತಾ ಬರಲಾಗಿದ್ದು, ಇದರಿಂದ ಧಾರ್ಮಿಕ ಮನೋಭಾವನೆ ಜೊತೆಗೆ ಸಮಾಜದ ಸಂಘಟನೆಗೆ ಪೂರಕವಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ನವ ಬೃಂದಾವನ ಭಜನಾ ಮಂಡಳಿಯ ಅಧ್ಯಕ್ಷರು, ಸದಸ್ಯರು, ವಾಸವಿ ಮಹಿಳಾ ಮಂಡಳಿ ಹಾಗೂ ಯುವಕ ಸಂಘದ ಪದಾಧಿಕಾರಿಗಳು, ಶ್ರೀ ಕೊಲ್ಲಾಪುರ ಮಹಾಲಕ್ಷ್ಮಿ ದರ್ಶನದ ಯಾತ್ರೆಗೆ ತೆರಳಿ ದೇವಿಯ ಅನುಗ್ರಹ ಪಡೆದುಕೊಂಡರು.

ಮನಸೆಳೆದ ಜಯ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಶಾಲೆಯ ವಿಜ್ಞಾನ ವಸ್ತು ಪ್ರದರ್ಶನ

ಗಣರಾಜ್ಯೋತ್ಸವ ಅಂಗವಾಗಿ ಹಾಸನದ ಜಯ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಆಯೋಜಿಸಿದ್ದ ವಿಜ್ಞಾನ ವಸ್ತು ಪ್ರದರ್ಶನ ವೀಕ್ಷಕರ ಮನ ಸೆಳೆಯಿತು.

ಶಾಲೆಯ ವಿದ್ಯಾರ್ಥಿಗಳು ವೈಜ್ಞಾನಿಕ ಆಲೋಚನೆಗಳ ಮೂಲಕ ತಾವೇ ತಯಾರಿಸಿದ ತಮ್ಮ ತಮ್ಮ ವಿವಿಧ ಮಾದರಿಗಳ ಬಗ್ಗೆ ವಿವರಣೆ ನೀಡಿದ್ದು  ಗಮನಾರ್ಹವಾಗಿತ್ತು.

ಸಂಸ್ಥೆಯ ಕಾರ್ಯದರ್ಶಿ ಚಂದ್ರಶೇಖರ್ ಮಾತನಾಡಿ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಮೂಡಿಸುವ ನಿಟ್ಟಿನಲ್ಲಿ ಕಳೆದ ಕೆಲವು ವರ್ಷಗಳಿಂದ ಈ ರೀತಿ ವಿಜ್ಞಾನ ವಸ್ತು ಪ್ರದರ್ಶನ ಏರ್ಪಡಿಸಲಾಗುತ್ತಿದೆ. ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವನೆ ಹೆಚ್ಚಿಸುವ ಜೊತೆಗೆ ವ್ಯಕ್ತಿತ್ವ ವಿಕಸನಕ್ಕೂ ಇದು ಸಹಕಾರಿ. ಪ್ರಪಂಚದ ಜ್ಞಾನ ತಿಳುವಳಿಕೆ ಹೆಚ್ಚುವುದು. ಬಾಲ್ಯದಿಂದಲೇ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವನೆ ಮೂಡಿಸುವ ಪ್ರಯತ್ನ ಇದಾಗಿದೆ ಅಲ್ಲದೇ ಪ್ಲಾನಟೇರಿಯಂ (ಬಾಹ್ಯಾಕಾಶ ತಾರಾಲಯ) ಮೊಟ್ಟ ಮೊದಲ ಬಾರಿಗೆ ನಮ್ಮ ಶಾಲೆಯಲ್ಲಿ ಏರ್ಪಡಿಸಿದ್ದು  ಇದು ವಿದ್ಯಾರ್ಥಿಗಳು ವಿಜ್ಞಾನ, ಎಂಜಿನಿಯರಿಂಗ್ ತಂತ್ರಜ್ಞಾನ ಕುರಿತು ಉಪಯುಕ್ತವಾಗಿದೆ  ಎಂದರು.

ಕನ್ನಡ ವಿಭಾಗದಲ್ಲಿ ಹಾಸನ ಜಿಲ್ಲೆಯ ಹೆಮ್ಮೆಯ ಸಾಹಿತಿಗಳು ಶೀರ್ಷಿಕೆ ಪೋಟೋಗಳ ಭಾನು ಮುಷ್ತಾಕ್, ಗೊರೂರು ಅನಂತರಾಜು, ಶೈಲಜ ಹಾಸನ, ಟಿ.ಹೆಚ್. ಅಪ್ಪಾಜಿಗೌಡರು, ಪತ್ರಕರ್ತೆ ಲೀಲಾವತಿ ಇದ್ದು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.

ಸಂಸ್ಥೆ ವತಿಯಿಂದ ಸಾಹಿತಿ ಪತ್ರಕರ್ತರನ್ನು ಸನ್ಮಾನಿಸಿ ಗೌರವಿಸಲಾಯಿತು. ಪತ್ರಕರ್ತ ಸಂಘದ ಮಾಜಿ ಅಧ್ಯಕ್ಷರು ಪ್ರಸನ್ನಕುಮಾರ್, ಸಂಸ್ಥೆಯ ಅಧ್ಯಕ್ಷೆ ಪೂರ್ಣಿಮಾ ಇದ್ದರು.

ಮನರಂಜಿಸಿದ ಸುಗಮ ಸಂಗೀತ ರಂಗಗೀತೆ ನಾಟಕ ಸಾಂಸ್ಕೃತಿಕ ಕಾರ್ಯಕ್ರಮಗಳು

ಹಾಸನ: ಹಾಸನದ ವಿಜಯನಗರ ಬಡಾವಣೆ ಶ್ರೀ ಶಾರದ ಕಲಾಸಂಘ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು, ಮೈಸೂರು, ಹಾಸನ ವಿಜಯನಗರ ಬಡಾವಣೆ ಕ್ಷೇಮಾಭಿವೃದ್ಧಿ ಸಂಘ ಇವರ ಸಂಯುಕ್ತಾಶ್ರಯದಲ್ಲಿ ೨೦೨೩-೨೪ನೇ ಸಾಲಿನ ವಿಶೇಷ ಘಟಕ ಯೋಜನೆಯಡಿ ಸಂಘದ ೧೬ನೇ ವಾರ್ಷಿಕೋತ್ಸವ ಗಣರಾಜ್ಯೋತ್ಸವ ಅಂಗವಾಗಿ ಹಾಸನ ವಿಜಯನಗರ ಬಡಾವಣೆ ಪಾರ್ಕ್ ಬಯಲು ರಂಗವೇದಿಕೆಯಲ್ಲಿ ಪ್ರದರ್ಶನಗೊಂಡ ಸುಗಮ ಸಂಗೀತ ರಂಗಗೀತೆ ನಾಟಕ ಪ್ರೇಕ್ಷಕರನ್ನು ರಂಜಿಸಿತು.

ಕಾರ್ಯಕ್ರಮದಲ್ಲಿ ಹಿರಿಯ ಕಲಾವಿದ ದರ್ಶನ್ ವೆಂಕಟೇಶ್ ಮಾತನಾಡಿ ಮೈಮನಗಳನ್ನು ಹಿಗ್ಗಿಸುವ ಶಕ್ತಿ ಕಲೆಗಿದೆ ಎಂದರು.

ಸಾಹಿತಿ ಗೊರೂರು ಅನಂತರಾಜು ಮಾತನಾಡಿ ಬಹಳ ವರ್ಷಗಳ ಹಿಂದೆ ತಾವು ಗೊರೂರಿನಲ್ಲಿದ್ದಾಗ ಪ್ರತಿ ವರ್ಷ ಗಣರಾಜ್ಯೋತ್ಸವ ಸ್ವಾತಂತ್ರೋತ್ಸವ ರಾಜ್ಯೋತ್ಸವ ಸಮಾರಂಭಗಳಲ್ಲಿ ಹೇಮಾವತಿ ಪ್ರಾಜೆಕ್ಟಿನಲ್ಲಿ ಬೆಳಿಗ್ಗೆಯಿಂದ ಸಂಜೆ ತನಕ ವಿವಿಧ ಕ್ರೀಡಾ ಸ್ಫರ್ಧೆಗಳು ನಡೆಯುತ್ತಿದ್ದವು. ಸಂಜೆ ಮನರಂಜನಾ ಮಂದಿರದಲ್ಲಿ ನಾಟಕ ಪ್ರದರ್ಶನ ಬಹುಮಾನ ವಿತರಣೆ ಇರುತ್ತಿತ್ತು. ಈ ಹಾದಿಯಲ್ಲಿ ವಿಜಯನಗರ ಬಡಾವಣೆಯ ಪಾರ್ಕಿನ ಈ ವಿಶಾಲ ಬಯಲು ರಂಗವೇದಿಕೆಯಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮ ನಡೆಯುತ್ತಿದೆ. ಇದು ಇಲ್ಲಿಗೆ ನಿಲ್ಲದೇ ಪ್ರತಿ ವರ್ಷ ನಡೆದುಕೊಂಡು ಹೋಗಲಿ ಎಂದು ಆಶಿಸಿದರು.

ವಿಜಯನಗರ ಬಡಾವಣೆ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರು ಬಿ.ಹೆಚ್.ನಾರಾಯಣಗೌಡರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಇಂತಹ ಒಂದು ಸುಂದರ ಮನರಂಜನಾ ಕಾರ್ಯಕ್ರಮ ನಮಗೆಲ್ಲಾ ಹರ್ಷ ತಂದಿದೆ ಎಂದರು.

ಉಪಾದ್ಯಕ್ಷರು ಮಲ್ಲಿಕಾರ್ಜುನ್, ಎಸ್.ಶಿವಶಾಂತಪ್ಪ, ಖಜಾಂಚಿ ಬಿ.ಆರ್. ಮೊಗಣ್ಣಗೌಡರು ಇದ್ದರು. ಯೋಗೇಂದ್ರ ದುದ್ದರಿಂದ ಜಾನಪದ ಗೀತೆ, ಹೆಚ್.ಜಿ,ಗಂಗಾಧರ್‌ರಿಂದ ಸುಗಮ ಸಂಗೀತ, ರಂಗ ನಿರ್ದೇಶಕ ಎ.ಸಿ.ರಾಜು, ಕಲಾವಿದರು ನಾಗರಾಜು, ರಮೇಶ್, ಬ್ಯಾಟಚಾರ್, ಯರೇಹಳ್ಳಿ ಮಂಜೇಗೌಡ್ರು, ರಾಜಣ್ಣ ಪಟ್ನ ಆಲೂರು ರಂಗಗೀತೆಗಳನ್ನು ಹಾಡಿದರು. ಸಾವಿತ್ರಮ್ಮ, ಸಿ.ರಾಣಿ ಸಂಗಡಿಗರಿಂದ ಜನಪದ ಗೀತೆ, ನೃತ್ಯ ಮತ್ತು ಹೆಚ್.ಜಿ. ವಿಜಯಕುಮಾರ್ ಗ್ಯಾರಂಟಿ ರಾಮಣ್ಣ ತಂಡದಿಂದ ಬಾಡಿದ ಬದುಕು ನಾಟಕ ಪ್ರದರ್ಶನಗೊಂಡಿತು.

ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯ ಹಿತದೃಷ್ಟಿಯಿಂದ ಸ್ಥಾಪಿತವಾದ ಜಿಎಂಯು, ಉನ್ನತ ಶಿಕ್ಷಣದ ಜ್ಞಾನದೊಂದಿಗೆ, ವೃತ್ತಿಪರ ಬದುಕು ಕಟ್ಟಿಕೊಡುವಲ್ಲಿ ಆಧ್ಯತೆ ನೀಡಿದೆ

ಗಂಗಾವತಿ: ೨೦೦೧-೦೨ ರಲ್ಲಿ ದಾವಣಗೆರೆಯ ಅಂದಿನ ಲೋಕಸಭೆ ಸದಸ್ಯರಾದ ದಿ|| ಶ್ರೀ ಮಲ್ಲಿಕಾರ್ಜುನಪ್ಪನವರು ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಅನುಕೂಲವಾಗುವ ದೃಷ್ಟಿಯಿಂದ ಜಿ.ಎಂ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ ಸ್ಥಾಪಿಸಿದರು. ಈ ಸಂಸ್ಥೆಯು ಉನ್ನತ ಶಿಕ್ಷಣದೊಂದಿಗೆ ಜ್ಞಾನದೊಂದಿಗೆ ಬದುಕು ಕಟ್ಟಿಕೊಡುವ ಜಿ.ಎಂ. ವಿಶ್ವವಿದ್ಯಾಲಯವಾಗಿ ಪದವಿ, ಸ್ನಾತಕೋತ್ತರ ಪದವಿ ಜೊತೆಗೆ ಸ್ವಯಂ ಉದ್ಯೋಗದ ಕೋರ್ಸ್ಗಳ ಮೂಲಕ ಪ್ರಖ್ಯಾತಿ ಹೊಂದಿದೆ ಎಂದು ಜಿ.ಎಂ. ವಿಶ್ವವಿದ್ಯಾಲಯದ ಹೆಚ್.ಆರ್ ಮುಖ್ಯಸ್ಥರಾದ ವೀರಗಂಗಾಧರಸ್ವಾಮಿ ಅವರು ನಗರದ ಸರ್ವೇಶ ಹೋಟಲ್‌ನಲ್ಲಿ ಜನವರಿ-೨೩ ರಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಶ್ರೀ ಜಿ. ಮಲ್ಲಿಕಾರ್ಜುನಪ್ಪ ಅವರ ಆಶಯದಂತೆ ೨೦೨೩ ರಲ್ಲಿ ಶ್ರೀಶೈಲ ಎಜುಕೇಶನ್ ಟ್ರಸ್ಟ್‌ನ ಅಡಿ ಸ್ಥಾಪಿತವಾಗಿರುವ ಜಿ.ಎಮ್ ವಿಶ್ವವಿದ್ಯಾಲಯವು ಇಂಜಿನಿಯರಿಂಗ್, ವಾಣಿಜ್ಯ, ಕಂಪ್ಯೂಟರ್, ಮ್ಯಾನೇಜೆಂಟ್, ವಿಜ್ಞಾನ, ಕಾನೂನು ವಿಭಾಗಗಳು ಸೇರಿದಂತೆ ೫೭ ವಿವಿಧ ಪದವಿ ಹಾಗೂ ಸ್ನಾತಕೋತ್ತರ ಪದವಿ ಕೋರ್ಸ್ಗಳನ್ನು ಪ್ರಾರಂಭಿಸಲಾಗಿದೆ. ೫೪ ಎಕರೆ ಪರಿಸರ ಸ್ನೇಹಿ ಪ್ರದೇಶದಲ್ಲಿ ಈ ವಿಶ್ವವಿದ್ಯಾನಿಲಯದ ಕ್ಯಾಂಪಸ್ ಹೊಂದಿದ್ದು, ೩೫೦ ಕ್ಕೂ ಹೆಚ್ಚು ಅನುಭವಿ ಅಧ್ಯಾಪಕ ವೃಂದವನ್ನು ಒಳಗೊಂಡಿದೆ. ೮ ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಇಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಅಷ್ಟಲ್ಲದೇ ಸಿಎನ್‌ಸಿ ಪ್ರೋಗ್ರಾಮಿಂಗ್, ಬ್ಯೂಟಿ ಕೇರ್ ಮತ್ತು ಹೇರ್ ಡ್ರೆಸ್ಸಿಂಗ್, ಫ್ಯಾಷನ್ ವಿನ್ಯಾಸ ಮತ್ತು ಉಡುಗೆ ತಯಾರಿಕೆ ಮತ್ತು ಗ್ರಾಫಿಕ್ ವಿನ್ಯಾಸ ಈ ಸರ್ಟಿಫಿಕೇಟ್ ಕೋರ್ಸ್ಗಳನ್ನು ಪ್ರಾರಂಭಿಸಲಾಗಿದೆ.
ಫಲಿತಾಂಶ ಆಧಾರಿತ ಮತ್ತು ಸಾಮರ್ಥ್ಯ ಚಾಲಿತ ಶಿಕ್ಷಣ, ಪ್ರಾಜೆಕ್ಟ್ ಆಧಾರಿತ ಮತ್ತು ಅನುಭವದ ಕಲಿಕೆ, ಸಮಗ್ರ ಅಭಿವೃದ್ಧಿ ಕೇಂದ್ರ. ೨೧ನೇ ಶತಮಾನದ ಕಲಿಕೆಗಾಗಿ ಡಿಜಿಟಲ್ ಕ್ಯಾಂಪಸ್, ಜಾಗತಿಕ ಇಮ್ಮರ್ಶನ್ ಕಾರ್ಯಕ್ರಮಗಳು, ನಾವೀನ್ಯತೆ ಮತ್ತು ವಾಣಿಜ್ಯೋದ್ಯಮ ಇನ್ನುಬೇಟರ್ ಪ್ರಯೋಜನಗಳನ್ನು ಜೆ.ಎಂ.ಯು ನೀಡಲಿದೆ.

ಕೆಸಿಇಟಿ ನಲ್ಲಿ ಉನ್ನತ ೨೦೦೦ ರೊಳಗೆ ಶ್ರೇಣಿಗಳನ್ನು ಗಳಿಸುವ ವಿದ್ಯಾರ್ಥಿಗಳಿಗೆ ಶೇ. ೧೦೦% ರವರೆಗೆ ಬೋಧನಾ ಶುಲ್ಕ ಮನ್ನಾ, ರಾಜ್ಯ ಅಥವಾ ರಾಷ್ಟ್ರಮಟ್ಟದಲ್ಲಿ ಕ್ರೀಡೆಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಶೇ. ೭೫% ರವರೆಗೆ ಬೋಧನಾ ಶುಲ್ಕ ಮನ್ನಾ ಆರ್ಥಿಕವಾಗಿ ಹಿಂದುಳಿದ ಹಿನ್ನೆಲೆಯ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನಗಳ ಕೊಡುಗೆಗಳನ್ನು ಜೆ.ಎಂ.ಯು ನೀಡಿದೆ.

ಉನ್ನತ ಶಿಕ್ಷಣವನ್ನು ಪಡೆಯಲು ಬಯಸುವ ವಿದ್ಯಾರ್ಥಿಗಳು ಜಿಎಂ ವಿಶ್ವವಿದ್ಯಾಲಯವು ಶೈಕ್ಷಣಿಕ ಉತ್ಕೃಷ್ಟತೆಯ ಪರಂಪರೆ ಮತ್ತು ವಿದ್ಯಾರ್ಥಿಗಳ ಯಶಸ್ಸಿಗೆ ಆಯ್ಕೆ ಮಾಡಿಕೊಳ್ಳಬೇಕೆಂದು ಹೇಳಿದರು.

ಈ ಪತ್ರಿಕಾಗೋಷ್ಠಿಯಲ್ಲಿ ವಿಶ್ವವಿದ್ಯಾಲಯದ ಸಲಹೆಗಾರರಾದ ರುದ್ರಯ್ಯ, ಪ್ರೋ|| ಡಾ. ರಾಜಕುಮಾರ, ವಕೀಲರು ಮತ್ತು ಕಾನೂನು ಸಲಹೆಗಾರರಾದ ನಾಗರಾಜ ಗುತ್ತೇದಾರ, ಜಗದೀಶ ಬೀಳಗಿಯವರು ಹಾಜರಿದ್ದರು.

ದೇವೆಂದ್ರಕುಮಾರ ಇಮ್ಮಡಿ ಅಮೇರಿಕ ಇವರಿಂದ ದಾಸನಾಳ ಗ್ರಾಮದ ಶಾಲೆಗೆ ತಟ್ಟೆ ಮತ್ತು ಲೋಟಗಳ ದೇಣಿಗೆ

ಗಂಗಾವತಿ: ತಾಲೂಕಿನ ದಾಸನಾಳ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಶ್ರೀ ದೇವೇಂದ್ರ ಕುಮಾರ ಇಮ್ಮಡಿ ಅಮೇರಿಕ ಅವರು ವಿದ್ಯಾರ್ಥಿಗಳ ಅಕ್ಷರ ದಾಸೋಹ ಹಾಗೂ ಕ್ಷೀರ ಭಾಗ್ಯಕ್ಕೆ ಅನುಕೂಲವಾಗುವಂತೆ ಶಾಲೆಗೆ 50 ತಟ್ಟೆ ಮತ್ತು 50 ಲೋಟಗಳನ್ನು ದೇಣಿಗೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ಮುಖ್ಯೋಪಾಧ್ಯಾಯರಾದ ಪರಶುರಾಮ ಕರಡಿ, ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಭಿಮಪ್ಪ, ಸದಸ್ಯರಾದ ವೆಂಕಟೇಶ, ಮಾರುತೇಶ, ನಿರುಪಾದಿ, ಮಾಜಿ ತಾ‌.ಪಂ ಸದಸ್ಯರಾದ ದೇವೇಂದ್ರಗೌಡ, ಸಹಶಿಕ್ಷಕರಾದ ನಾಗರಾಜ, ಕಸ್ತೂರಿ, ಜ್ಯೋತಿ, ತುಳಸಿ, ವಿದ್ಯಾಶ್ರೀ, ಕು.ಸಂಗೀತಾ, ಅತಿಥಿ ಶಿಕ್ಷಕರಾದ ಸುಷ್ಮಾ ಹಾಗೂ ಮುದ್ದು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಮಹಾದಾನಿಗಳ ಸೇವಾ ಕಾರ್ಯ, ಅವರ ಸಹೃದಯಯತೆಗೆ ಅನಂತ ಅನಂತ ಧನ್ಯವಾದಗಳನ್ನು ಸಲ್ಲಿಸಿದ್ದಾರೆ…

ನಮ್ಮ ಶಾಲೆಗೆ ತಲುಪಲು ಅತ್ಯಂತ ಕಾಳಜಿ ವಹಿಸಿ ಕೊಡಿಸಿದ ಆತ್ಮೀಯರಾದ ಅಶೋಕ ಹೊಸಮನಿ, ಜಗದೀಶ್ ಈಳಿಗೇರ, ಮರಗೂರು ಮುರುಗೇಶ್, ಮೈಲಾರಪ್ಪ ಬೂದಿಹಾಳ ಇವರ ಸಹಕಾರವನ್ನು ಮರೆಯುವಂತಿಲ್ಲಾವೆಂದು ಮುಖ್ಯೋಪಾಧ್ಯಾಯರು ಮಾತನಾಡಿದರು.

ಬಿ.ಇಡಿ ಎರಡನೇ ಸೆಮಿಸ್ಟರ್‌ನ ಫಲಿತಾಂಶ ಪ್ರಕಟ ಗಂಗಾವತಿಯ ಟಿ.ಎಂ.ಎ.ಇ ಶಿಕ್ಷಣ ಮಹಾವಿದ್ಯಾಲಯದ ಶೇ ೧೦೦ ರಷ್ಟು ವಿದ್ಯಾರ್ಥಿಗಳು ಉತ್ತೀರ್ಣ.

ಗಂಗಾವತಿ: ಕೊಪ್ಪಳ ವಿಶ್ವವಿದ್ಯಾಲಯ ಕೊಪ್ಪಳ ಅಡಿಯಲ್ಲಿ ಬಿ.ಎಡ್ ನ ಎರಡನೇ ಸೆಮಿಸ್ಟರ್ ಫಲಿತಾಂಶ ಕೇವಲ ಮೌಲ್ಯಮಾಪನಗೊಂಡ ೩ ದಿನಗಳಲ್ಲಿ ಪ್ರಕಟಗೊಂಡಿದ್ದು, ಗಂಗಾವತಿ ನಗರದ ಟಿ.ಎಂ.ಎ.ಇ ಸಂಸ್ಥೆಯ ಶಿಕ್ಷಣ ಮಹಾವಿದ್ಯಾಲಯದ ಫಲಿತಾಂಶ ೧೦೦% ಆಗಿದ್ದು ಸಂತೋಷದಾಯಕ. ವಿದ್ಯಾಲಯದ ಕುಮಾರ ಶರಣಗೌಡ (೫೪೪/೬೦೦), ಕುಮಾರಿ ಮುತ್ತಮ್ಮ (೫೪೩/೬೦೦), ಕುಮಾರಿ ರತ್ನಮ್ಮ (೫೪೩/೬೦೦) ಮತ್ತು ಕುಮಾರಿ ಮುಸ್ಕಾನ್ (೫೪೩/೬೦೦) ಪ್ರಥಮ ಹಾಗೂ ದ್ವಿತೀಯ ಸ್ಥಾನಗಳನ್ನು ೩ ವಿದ್ಯಾರ್ಥಿಗಳು ಪಡೆದುಕೊಂಡಿದ್ದು ಮಹಾವಿದ್ಯಾಲಯಕ್ಕೆ ಹೆಮ್ಮೆ ತಂದಿರುತ್ತಾರೆ. ಪ್ರಯುಕ್ತ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಷ.ಬ್ರ ವರಸದ್ಯೋಜಾತ ಮಹಾಸ್ವಾಮಿಗಳು, ಕಾರ್ಯದರ್ಶಿಗಳಾದ ಡಾ. ಟಿ.ಎಂ ಚಂದ್ರಶೇಖರಯ್ಯನವರು, ಸರ್ವ ಸದಸ್ಯರು, ಪ್ರಿನ್ಸಿಪಾಲ ಮತ್ತು ಸಿಬ್ಬಂದಿ ವರ್ಗದವರು ಶುಭ ಹಾರೈಸಿದ್ದಾರೆ.

ಚುನಾವಣೆಗಳಲ್ಲಿ ಅರ್ಹರಿಗೆ ಮತ ಚಲಾಯಿಸಿ: ಸದಾನಂದ ನಾಗಪ್ಪ ನಾಯ್ಕ್ ಸಲಹೆ

ಗಂಗಾವತಿ : ಮತದಾರರು ಆಸೆ, ಆಮೀಷಕ್ಕೆ ಬಲಿಯಾಗದೇ ಮತ ಚಲಾಯಿಸಬೇಕು ಎಂದು ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಸದಾನಂದ ನಾಗಪ್ಪ ನಾಯ್ಕ್ ಹೇಳಿದರು.

ನಗರದ ಶ್ರೀರಾಮುಲು ಸ್ಮಾರಕ ಮಹಾವಿದ್ಯಾಲಯದ ಶ್ರೀ ರಾಮಭಟ್ ಜೋಶಿ ಸ್ಮಾರಕ ರಜತ ಭವನದಲ್ಲಿ ತಾಲೂಕು ಆಡಳಿತ ಹಾಗೂ ತಾಲೂಕು ಸ್ವೀಪ್ ಸಮಿತಿ ವತಿಯಿಂದ ಶನಿವಾರ ಆಯೋಜಿಸಿದ್ದ ರಾಷ್ಟ್ರೀಯ ಮತದಾರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

18 ವರ್ಷ ಮೇಲ್ಪಟ್ಟ ಎಲ್ಲರೂ ಕಡ್ಡಾಯವಾಗಿ ಮತ ಚಲಾಯಿಸಬೇಕು. ಯಾವುದೇ ಆಮೀಷಗಳಿಗೆ ಬಲಿಯಾಗದೇ ಅಭಿವೃದ್ಧಿಗೆ ನೆರವಾಗುವ ಜನಪ್ರತಿನಿಧಿಗೆ ಮತ ಹಾಕಬೇಕು. ದೇಶದ ಏಳ್ಗೆಗೆ ಯುವ ಸಮುದಾಯದ ಪಾತ್ರ ಬಹುಮುಖ್ಯವಾಗಿದ್ದು, ಹೀಗಾಗಿ ಚುನಾವಣೆಗಳಲ್ಲಿ ಅರ್ಹರಿಗೆ ಮತ ಚಲಾಯಿಸಬೇಕು. ಯೋಗ್ಯರನ್ನು ಆಯ್ಕೆ ಮಾಡಿದಾಗ ಮಾತ್ರ ದೇಶ ಪ್ರಗತಿ ದಿಕ್ಕಿನಲ್ಲಿ ಸಾಗಲು ಅನುಕೂಲ ಆಗುತ್ತದೆ ಎಂದರು.

ಹಿರಿಯ ಸಿವಿಲ್ ನ್ಯಾಯಾಧೀಶರಾದ ರಮೇಶ ಗಾಣಿಗೇರ ಅವರು ಮಾತನಾಡಿ, ಚುನಾವಣೆ ಎಂಬುದು ಹಬ್ಬ ಇದ್ದಂತೆ ಪ್ರತಿಯೊಬ್ಬರೂ ಖುಷಿಯಿಂದ ಪಾಲ್ಗೊಳ್ಳಬೇಕು. ಹಣ, ಹೆಂಡಕ್ಕೆ ಮತ ಮಾರಿಕೊಳ್ಳದೇ ದೇಶದ ಅಭಿವೃದ್ಧಿಗೆ ಹಿತ ಬಯಸುವ ನಾಯಕರನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದರು.

ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ನಾಗೇಶ ಪಾಟೀಲ್ ಅವರು ಮಾತನಾಡಿ, ಮತದಾನದ ಹಕ್ಕನ್ನು ಜವಾಬ್ದಾರಿಯುತವಾಗಿ ನಿಭಾಯಿಸಬೇಕು. ಯುವ ಸಮುದಾಯ ತಮ್ಮ ಕುಟುಂಬಸ್ಥರು ಹಾಗೂ ಗ್ರಾಮಸ್ಥರನ್ನು ಮತದಾನ ಮಾಡಿಸಲು ಪ್ರೇರೆಪಿಸುವ ಕೆಲಸ ಮಾಡಬೇಕು ಎಂದರು.

ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳಾದ ಲಕ್ಷ್ಮೀದೇವಿ ಅವರು ಮಾತನಾಡಿ, ಮತದಾನ ದಿನ ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಬೇಕು. ಮತದಾನ ಹೆಚ್ಚಳಕ್ಕೆ ಹಲವಾರು ಜಾಗೃತಿ ಕಾರ್ಯಕ್ರಮ ಮಾಡಿದರೂ ಮತದಾನ ಪ್ರಮಾಣ ನಿರೀಕ್ಷೆಯಂತೆ ಹೆಚ್ಚಳ ಆಗುತ್ತಿಲ್ಲ. ಮತದಾನ ಬಗ್ಗೆ ಯಾರೂ ನಿಷ್ಕಾಳಜಿ ತೋರದೇ ಕಡ್ಡಾಯಾಗಿ ಹಕ್ಕು ಚಲಾಯಿಸಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಹಸೀಲ್ದಾರ್ ಯು. ನಾಗರಾಜ ಅವರು ಮಾತನಾಡಿ, ತಾಲೂಕಿನಲ್ಲಿ ಮತದಾರರ ಸಂಖ್ಯೆ ಹಾಗೂ ಮತದಾನ ಮಹತ್ವ ಕುರಿತು ಮಾತನಾಡಿದರು.

ನಂತರ ಕಾಲೇಜು ವಿದ್ಯಾರ್ಥಿಗಳಿಗೆ ಮತದಾನ ಮಹತ್ವ ಕುರಿತು ಪ್ರತಿಜ್ಞಾ ವಿಧಿ ಬೋಧಿಸಲಾಯಿತು.

ಡಿವೈಎಸ್ಪಿ ಸಿದ್ದಲಿಂಗಪ್ಪ ಗೌಡರ್, ನಗರಸಭೆ ವ್ಯವಸ್ಥಾಪಕರಾದ ಷಣ್ಮುಖಪ್ಪ, ಸಿಡಿಪಿಓ ಜಯಶ್ರೀ, ಗಂಗಾವತಿ ನರ್ಸಿಂಗ್ ಕಾಲೇಜು ಪ್ರಾಂಶುಪಾಲರಾದ ಬವರಾಜ ಎಂ.ಎಚ್., ಶಿಕ್ಷಣ ಇಲಾಖೆಯ ಟಿಪಿಓ ಉಮಾದೇವಿ ಪಾಟೀಲ್, ಗ್ರೇಡ್ 2 ತಹಸೀಲ್ದಾರ್ ಮಹಾಂತಗೌಡ್ರು, ಶಿರಸ್ತೇದಾರ್ ರವಿಕುಮರ್ ನಾಯಕವಾಡಿ, ಕಂದಾಯ ಇಲಾಖೆ, ನಗರಸಭೆ, ತಾಪಂ ಸಿಬ್ಬಂದಿಗಳು, ಬೂತ್ ಮಟ್ಟದ ಅಧಿಕಾರಿಗಳು, ಕಾಲೇಜು ಆಫ್ ಸಿರಿಗೇರಿ ಡೊ.ವೆಂಕೋಬ ಶೆಟ್ಟಿ ಮೆಮೋರಿಯಲ್ ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳು ಇದ್ದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಿಧಾನ ದಾರಿದೀಪವಾಗಿದೆ: ಪಾರ್ಥಸಾರಥಿ

ಗಂಗಾವತಿ: ವಿಶ್ವದಲ್ಲಿ ಬೃಹತ್ ಪ್ರಜಾಪ್ರಭುತ್ವ ಹೊಂದಿದ ಭಾರತ ದೇಶ ಅತ್ಯಂತ ಪವಿತ್ರವಾದ ಸಂವಿಧಾನವನ್ನು ಹೊಂದಿದ್ದು ಪ್ರತಿಯೊಬ್ಬರೂ ಸಂವಿಧಾನದ ಆಶಯದಂತೆ ಜೀವನದ ಉದ್ದಕ್ಕೂ ನಡೆಸಿಕೊಳ್ಳುವುದರ ಮೂಲಕ ಸಂವಿಧಾನವನ್ನು ಗೌರವಿಸಬೇಕೆಂದು ಸಮೀಪದ ಶ್ರೀರಾಮನಗರ ಶ್ರೀ ಸ್ವಾಮಿ ವಿವೇಕಾನಂದ ಪ್ರೌಢಶಾಲೆಯ ಸಂಸ್ಥಾಪಕ ಅಧ್ಯಕ್ಷ ಪಾರ್ಥ ಸಾರಥಿ ಹೇಳಿದರು.

ಅವರು ರವಿವಾರದಂದು. 76ನೇ ಗಣರಾಜ್ಯೋತ್ಸವಕ್ಕೆ ಬಾತ್ ಬಾ ಗಾಂಧಿ ಹಾಗೂ ಡಾ. ಬಿ.ಆರ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿದರು.

ಸಮಾನತೆ ಸ್ವಾತಂತ್ರ್ಯತೆ ಬ್ರಾತೃತ್ವವನ್ನು ಭಾವನೆಯನ್ನು ಆಡಳಿತದ ವ್ಯವಸ್ಥೆಯಲ್ಲಿ ಪಾರದರ್ಶಕತೆಯನ್ನು ಕಾಪಾಡುವ ಉದ್ದೇಶದಿಂದ ಶಾಸಕಾಂಗ ಕಾರ್ಯಾಂಗ ಹಾಗೂ ನ್ಯಾಯಾಂಗ ವ್ಯವಸ್ಥೆಯನ್ನು ಸಂವಿಧಾನದಲ್ಲಿ ಉಲ್ಲೇಖಿಸಲಾಗಿದ್ದು ಕಾಣಬಹುದಾಗಿದೆ ಎಂದು ತಿಳಿಸಿ ದರು.

ಮುಖ್ಯ ಗುರುಗಳಾದ ಶಾರುಣ್ ಕುಮಾರಿ ಮಾತನಾಡಿ ವಿದ್ಯಾರ್ಥಿ ದೆಸೆಯಲ್ಲಿ ಸಂವಿಧಾನದ ತತ್ವ ಸಿದ್ಧಾಂತಗಳನ್ನು ಅರಿತುಕೊಳ್ಳುವುದರ ಮೂಲಕ ಸದೃಢವಾದ ಭಾರತದ ಅಭಿವೃದ್ಧಿಗೆ ಕಂಕಣ ಬಂದರಾಗಬೇಕು ಎಂದು ಸಲಹೆ ನೀಡಿದರು.

ವಿದ್ಯಾರ್ಥಿಗಳಿಂದ ಆಕರ್ಷಕ ಪಥ ಸಂಚಲನ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮಗಳು, ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸೇರಿದಂತೆ ಇತರೆ ಕಾರ್ಯಕ್ರಮಗಳು ಸಂಭ್ರಮದಿಂದ ಜರುಗಿದವು.

ಈ ಸಂದರ್ಭದಲ್ಲಿ ಶಿಕ್ಷಕರು, ವಿದ್ಯಾರ್ಥಿಗಳ ಪಾಲಕರು, ಗ್ರಾಮದ ಗಣ್ಯರು ಉಪಸ್ಥಿತರಿದ್ದರು.