ಎನ್.ಎಸ್.ಎಸ್. ವಾರ್ಷಿಕ ವಿಶೇಷ ಶಿಬಿರ ಉದ್ಘಾಟನೆ

ಗಂಗಾವತಿ: ನಗರದ ಬಾಲಕರ ಪದವಿ ಪೂರ್ವ ಕಾಲೇಜಿನ ಎನ್.ಎಸ್.ಎಸ್ ಘಟಕದ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನೆಯು ಸೆಪ್ಟೆಂಬರ್-೨೦ ರಂದು ತಾಲೂಕಿನ ಅರಳಹಳ್ಳಿ ಗ್ರಾಮದ ಅಲ್ಪಸಂಖ್ಯಾತ ಬಾಲಕಿಯರ ಪದವಿ ಪೂರ್ವ ಕಾಲೇಜು ಆವರಣದಲ್ಲಿ ನೆರವೇರಿತು. ಶಿಬಿರವನ್ನು ಅರಳಹಳ್ಳಿ ಗ್ರಾಮದ ಪೂಜ್ಯ ವೇ.ಮೂ ಗವಿಸಿದ್ದಯ್ಯ ಸ್ವಾಮಿಗಳು ನೆರವೇರಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯರಾದ ಬಸಪ್ಪ ನಾಗೋಲಿ ಅವರು ವಹಿಸಿಕೊಂಡಿದ್ದರು. ಗ್ರಾ.ಪಂ ಮಾಜಿ ಉಪಾಧ್ಯಕ್ಷರಾದ ವೀರಭದ್ರಯ್ಯ, ಎಸ್.ಡಿ.ಎಂ.ಸಿ ಅಧ್ಯಕ್ಷರಾದ ದಾನನಗೌಡ, ಮಲ್ಲಿಕಾರ್ಜುನ, ಅಂಗನವಾಡಿ ಕಾರ್ಯಕರ್ತೆಯಾದ ಶ್ರೀಮತಿ ನಿರ್ಮಲ ಹಾಗೂ ಆಶಾ ಕಾರ್ಯಕರ್ತೆಯಾದ ಶಿವಗಂಗಮ್ಮ ಉಪಸ್ಥಿತರಿದ್ದರು. ಸಂಸ್ಥೆಯ ಹಿರಿಯ ಉಪನ್ಯಾಸಕರಾದ ಡಾ. ಲಿಂಗಣ್ಣ ಜಂಗಮರಹಳ್ಳಿ, ಗ್ರಂಥಪಾಲಕರಾದ ರಮೇಶ ಗಬ್ಬೂರು, ಎನ್.ಎಸ್.ಎಸ್ ಕಾರ್ಯಕ್ರಮ ಅಧಿಕಾರಿಗಳಾದ ರುದ್ರೇಶ್ ತಬಾಲಿ, ಇತಿಹಾಸ ಉಪನ್ಯಾಸಕರಾದ ಈಶ್ವರಪ್ಪ ಸಿ., ಉಪನ್ಯಾಸಕರಾದ ಮಹೇಶ್ ಹಿರೇಮಠ್, ನಿರುಪಾದಿ, ಶ್ರೀಕಾಂತ್ ಉಪಸ್ಥಿತರಿದ್ದರು.

ಅರಳಹಳ್ಳಿ ಬೃಹನ್ಮಠದ ವೇ.ಮೂ ಗವಿಸಿದ್ದಯ್ಯ ಸ್ವಾಮಿಗಳು ಶಿಬಿರವನ್ನು ಉದ್ಘಾಟಿಸಿ ಮಾತನಾಡುತ್ತಾ ಪ್ರತಿಯೊಬ್ಬರ ಜೀವನದಲ್ಲಿ ಶಿಕ್ಷಣ ಮತ್ತು ಸಂಸ್ಕಾರಗಳು ಬಹಳ ಮುಖ್ಯ. ಶಿಕ್ಷಣ ಒಂದೇ ಜೀವನವನ್ನು ಪರಿಪೂರ್ಣ ಮಾಡುವುದಿಲ್ಲ. ಅದಕ್ಕೆ ಉತ್ತಮವಾದ ಸಂಸ್ಕಾರದ ಅವಶ್ಯಕತೆ ಇದೆ. ಉತ್ತಮ ಸಂಸ್ಕಾರವನ್ನು ನಮ್ಮಲ್ಲಿ ತರುವ ಕೆಲಸ ಈ ಶಿಬಿರ ಮಾಡುತ್ತದೆ ಎಂದರು. ೭ ದಿನಗಳ ಕಾಲ ನಡೆಯುವ ಈ ಶಿಬಿರದಲ್ಲಿ ದೇಶ, ಸಮಾಜ ಮತ್ತು ವ್ಯಕ್ತಿ ವಿಕಸನಕ್ಕೆ ಸಂಬAಧಪಟ್ಟ ಅನೇಕ ವಿಷಯಗಳ ಕುರಿತು ಉಪನ್ಯಾಸಗಳನ್ನು ಹಮ್ಮಿಕೊಂಡಿದ್ದೀರಿ. ಉಪನ್ಯಾಸಕರ ವಿಷಯಗಳನ್ನು ಮನಸುಕೊಟ್ಟು ಆಲಿಸಿ ತಾವು ಈ ದೇಶದ ಉತ್ತಮ ಪ್ರಜೆಗಳಾಗಿ ಪರಿವರ್ತನೆಯಾಗಬೇಕು. ಕಾಯಕದಲ್ಲಿ ಯಾವುದೇ ಮೇಲು-ಕೀಳು ಇರುವುದಿಲ್ಲ. ವಿದ್ಯಾವಂತರಾದವರು ಕೃಷಿ ಕೆಲಸ ಮಾಡಬಾರದು ಎನ್ನುವ ಭಾವನೆ ಅನೇಕರಲ್ಲಿದೆ ಇದು ತಪ್ಪು. ಕೋಟಿ ವಿದ್ಯೆಗಳಲ್ಲಿ ಮೇಟಿ ವಿದ್ಯೆಯೇ ಮೇಲು ಎಂಬ ನಾಣ್ನುಡಿಯಂತೆ ಕೃಷಿ ಈ ಜಗತ್ತಿಗೆ ಅನ್ನ ನೀಡುವಂತಹ ಶ್ರೇಷ್ಠ ಕಾಯಕವಾಗಿದೆ. ಇದರ ಬಗ್ಗೆ ನಿರ್ಲಕ್ಷö್ಯ ಮಾಡದೇ ವೈಜ್ಞಾನಿಕ ಬೇಸಾಯ ಕೈಗೊಂಡು ದೇಶ ನಿರ್ಮಾಣದಲ್ಲಿ ತೊಡಗಲು ಕರೆ ನೀಡಿದರು. ಶಿಬಿರದ ಉದ್ದೇಶ ಮತ್ತು ಗುರಿಗಳ ಕುರಿತು ಹಾಗೂ ಶಿಬಿರದಲ್ಲಿ ವಿದ್ಯಾರ್ಥಿಗಳ ಭಾಗವಹಿಸುವಿಕೆ ಕುರಿತು ಹಿರಿಯ ಉಪನ್ಯಾಸಕರಾದ ಡಾ. ಲಿಂಗಣ್ಣ ಜಂಗಮರಹಳ್ಳಿ ಅವರು ಮಾತನಾಡಿದರು.

ಕಾರ್ಯಕ್ರಮ ಅಧಿಕಾರಿ ರುದ್ರೇಶ್ ತಬಾಲಿಯವರು ಎನ್.ಎಸ್.ಎಸ್. ಪ್ರತಿಜ್ಞಾವಿಧಿ ಬೋಧಿಸಿದರು. ಎನ್.ಎಸ್.ಎಸ್. ವಿದ್ಯಾರ್ಥಿನಿ ಕುಮಾರಿ ಬಾಳಮ್ಮ ಕಾರ್ಯಕ್ರಮ ನಿರೂಪಣೆ ಮಾಡಿದರು. ಶಿಬಿರವು ಸೆಪ್ಟೆಂಬರ್-೨೦ ರಿಂದ ೨೬ರವರೆಗೆ ಏಳು ದಿನಗಳ ಕಾಲ ನಿರಂತರವಾಗಿ ನಡೆಯಲಿದ್ದು, ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ. ಶಿಬಿರದಲ್ಲಿ ೩೦ ವಿದ್ಯಾರ್ಥಿನಿಯರು ೨೦ ವಿದ್ಯಾರ್ಥಿಗಳು ಸೇರಿ ಒಟ್ಟು ೫೦ ಜನ ಸ್ವಯಂ ಸೇವಕರು ಭಾಗವಹಿಸಿದ್ದರು.

ಯುವಜನತೆ ದೇಶದ ಆಸ್ತಿ: ಹೇಮಂತರಾಜ ಕಲ್ಮಂಗಿ

ಗಂಗಾವತಿ: ನಗರದ ಸಂಕಲ್ಪ ಎಜುಕೇಷನ್ ಟ್ರಸ್ಟ್ (ರಿ) ಅಂಗಸಂಸ್ಥೆಯಾದ ಸಂಕಲ್ಪ ಪ್ರಥಮ ದರ್ಜೆ ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯ ಪ್ರಥಮ ವರ್ಷದ ಪದವಿ ವಿದ್ಯಾರ್ಥಿನಿಯರ ಸ್ವಾಗತ ಸಮಾರಂಭ ಹಾಗೂ ಎನ್.ಎಸ್.ಎಸ್ ದೈನಂದಿನ ಚಟುವಟಿಕೆಗಳಿಗೆ ಚಾಲನೆಯನ್ನು ಐ.ಎಂ.ಎ ಹಾಲ್‌ನಲ್ಲಿ ನೀಡುತ್ತಾ, ಸಂಸ್ಥೆಯ ಅಧ್ಯಕ್ಷರಾದ ಹೇಮಂತರಾಜ ಕಲ್ಮಂಗಿಯವರು ಮಾತನಾಡಿ ಇಂದಿನ ಯುವ ಜನತೆ ದೇಶದ ಆಸ್ತಿಯಾಗಿದ್ದು, ವೈಯಕ್ತಿಕ-ಸಾಮಾಜಿಕ ಜವಾಬ್ದಾರಿಗಳನ್ನು ನಿರ್ವಹಿಸುತ್ತಾ ನಡೆದಾಗ ಮಾತ್ರ ದೇಶ ವಿಶ್ವಮಟ್ಟದಲ್ಲಿ ಗೌರವಕ್ಕೆ ಪಾತ್ರವಾಗುತ್ತದೆ. ಈ ನಿಟ್ಟಿನಲ್ಲಿ ಯುವಕರು ಪ್ರಾಮಾಣಿಕತೆಯಿಂದ, ಶ್ರದ್ಧೆಯಿಂದ ನಡೆಯುವಂತೆ ಕರೆ ನೀಡಿದರು.

ಈ ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರಾದ ಎಂ.ಆರ್. ಮಂಜುಸ್ವಾಮಿಯವರು ಪ್ರಾಸ್ತಾವಿಕ ನುಡಿಗಳನ್ನಾಡಿ, ವಿದ್ಯಾರ್ಥಿನಿಯರಿಗೆ ಗುಣಮಟ್ಟದ ಕೌಶಲ್ಯಗಳನ್ನು ಕರಗತ ಮಾಡಿಕೊಳ್ಳುತ್ತಾ ಉನ್ನತ ಶಿಕ್ಷಣವನ್ನು ಪಡೆದಾಗ ಮಾತ್ರ ಉದ್ಯೋಗವಕಾಶಗಳು ವಿಪುಲವಾಗಿ ದೊರೆಯುತ್ತವೆ. ಇದರ ಮೂಲಕ ವೈಯಕ್ತಿಕ, ಆರ್ಥಿಕ ಭದ್ರತೆ ಲಭಿಸುವುದಲ್ಲದೆ ಸ್ವಾವಲಂಬಿ ಜೀವನ ನಡೆಸಬಹುದು. ಈ ನಿಟ್ಟಿನಲ್ಲಿ ಆಧುನಿಕ ಮಾಧ್ಯಮಗಳ ಸದುಪಯೋಗ ಪಡೆದುಕೊಂಡು ಯಶಸ್ಸನ್ನು ಸಾಧಿಸುವಂತೆ ಮಾರ್ಗದರ್ಶನ ಮಾಡಿದರು.

ಇದೇ ಸಂದರ್ಭದಲ್ಲಿ ಹಿರಿಯ ಉಪನ್ಯಾಸಕರಾದ ನಾಗರಾಜ ಹೆಚ್. ವಿದ್ಯಾರ್ಥಿ ಒಕ್ಕೂಟದ ಪದಾಧಿಕಾರಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿ ವಿದ್ಯಾರ್ಥಿನಿಯರು ಜವಾಬ್ದಾರಿಯಿಂದ ಕಾರ್ಯನಿರ್ವಹಿಸುವಂತೆ ಸಲಹೆ ನೀಡಿ ಶುಭ ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ನಿರ್ದೇಶಕರಾದ ಡಾ. ಅಮಿತ್‌ಕುಮಾರ ರೆಡ್ಡಿ, ವಿದ್ಯಾರ್ಥಿನಿಯರು ಸ್ಪರ್ಧಾತ್ಮಕ ಪರಿಸರದಲ್ಲಿ ಸತತ ಪ್ರಯತ್ನ ಮಾಡುತ್ತಾ ಬದುಕನ್ನು ಕಟ್ಟಿಕೊಳ್ಳಲು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಉಪಸ್ಥಿತಿವಹಿಸಿದ್ದ ಪ್ರಾಚಾರ್ಯರಾದ ಬಸವರಾಜ ಶಿರಿಗೇರಿಯವರು, ವಿದ್ಯರ್ಥಿನಿಯರು ಯಾವುದೇ ಕೆಲಸ ಮಾಡಬೇಕಾದರೂ ಮೊದಲು ತಮ್ಮ ಕುಟುಂಬ, ತಂದೆ-ತಾಯಿ ಬಗ್ಗೆ ಆಲೋಚಿಸಿ ಮುಂದೆ ಸಾಗಿದರೆ ಖಂಡಿತ ಸಾಧಕಿಯರಾಗುತ್ತಾರೆ ಎಂದು ಹೇಳಿ, ನೂತನ ವಿದ್ಯಾರ್ಥಿನಿಯರಿಗೆ ಸ್ವಾಗತ ಕೋರಿ ಶುಭಹಾರೈಸಿದರು.

ವಿದ್ಯಾರ್ಥಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿಯಾದ ಕು. ಮುಸ್ಕಾನ್ ಕಂಫ್ಲಿ ಬಿ.ಕಾಂ ಹಾಗೂ ಸಹಕಾರ್ಯದರ್ಶಿಯಾದ ಕು. ಅಕ್ಷತಾ ಪಂಪಾಪತಿ ಎಲ್ಲಾ ವಿದ್ಯಾರ್ಥಿನಿಯರಿಗೂ ಹೂವು ನೀಡಿ, ಸ್ವಾಗತಿಸಿ ಶುಭ ಕೋರಿದರು.

ಈ ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಬಸವರಾಜ, ವೈ. ಬಸವನಗೌಡ, ಸುರೇಶ, ಶ್ರೀಮತಿ ಆಶಾ, ಶ್ರೀಮತಿ ಉಷಾದೇವಿ, ರಮೇಶ, ಚನ್ನಬಸವ, ವಿಶ್ವನಾಥ, ಶಿವಶರಣ, ರಾಹುಲ್, ಶ್ರೀಮತಿ ಮೇಘ, ಶರಣಮ್ಮ, ವೆಂಕಟಲಕ್ಷಿö್ಮ, ಗುರುಮೂರ್ತಿ, ಅಶೋಕ ಹೆಚ್.ಎಂ ಸೇರಿದಂತೆ ಇತರರ ಭಾಗವಹಿಸಿದ್ದರು.

ಈ ಕಾರ್ಯಕ್ರಮದಲ್ಲಿ ಉಪನ್ಯಾಸಕಿಯಾದ ಶ್ರೀಮತಿ ಸಂಪತ್‌ಕುಮಾರಿ ಅಚ್ಚುಕಟ್ಟಾಗಿ ನಿರೂಪಿಸಿದರು. ಶ್ರೀಮತಿ ವಿದ್ಯಾ ಗಣ್ಯರನ್ನು ಸ್ವಾಗತಿಸಿದರೆ, ಶಂಕರ ವರದಾಪುರ ವಂದಿಸಿದರು.

ತ್ಯಾಗ, ಬಲಿದಾನಗಳಿಂದ ವಿಮೋಚನೆ ದೊರಕಿದೆ: ನಾಗರಾಜ್ ಗುತ್ತೇದಾರ್

ಗಂಗಾವತಿ: ನಗರದ ಸಂಕಲ್ಪ ಪಿ.ಯು. ಕಾಲೇಜಿನಲ್ಲಿ ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆಯ ಪ್ರಯುಕ್ತ ಧ್ವಜಾರೋಹಣವನ್ನು ನೆರವೇರಿಸಿ ಸಂಸ್ಥೆಯ ಕಾರ್ಯಾಧ್ಯಕ್ಷರಾದ ನಾಗರಾಜ್ ಗುತ್ತೇದಾರ್ ವಕೀಲರು ಮಾತನಾಡುತ್ತಾ ಭಾರತ ೧೯೪೭ ಆಗಸ್ಟ್-೧೫ ರಂದು ಸ್ವಾತಂತ್ರ‍್ಯ ಗಳಿಸಿಕೊಂಡರೂ ಸಹ ದೇಶದ ಮೂರು ಪ್ರಾಂತ್ಯಗಳಾದ ಜಮ್ಮು ಕಾಶ್ಮೀರ್, ಜುನಾಗಡ್, ಹೈದರಾಬಾದ್ ಪ್ರಾಂತ್ಯಗಳು ಸ್ವಾಯತ್ತತೆ ಘೋಷಿಸಿಕೊಂಡವು. ಹೈದರಾಬಾದ್ ಪ್ರದೇಶ ವಿಸ್ತೀರ್ಣದಲ್ಲಿ ದೊಡ್ಡದಿದ್ದು ಭಾರತದಲ್ಲಿ ವಿಲೀನವಾಗದೆ ಹೊರಗೆ ಉಳಿಯಿತು.

ನವಾಬನ ದುರಾಡಳಿತದಿಂದ ಬೇಸತ್ತ ಹೈದರಾಬಾದ್ ಪ್ರಾಂತ್ಯದ ಜನ ಆತನ ವಿರುದ್ಧ ದಂಗೆ ಏಳುವ ಮಟ್ಟಕ್ಕೆ ಬಂದಾಗ ಹೈದರಾಬಾದ್ ನವಾಬನು ತನ್ನ ಖಾಸಗಿ ರಜಾಕರ ಸೇನೆಯನ್ನು ಬಳಸಿಕೊಂಡು ನಾಗರೀಕರ ಮೇಲೆ ಹಿಂಸಾ ಕೃತ್ಯಗಳನ್ನು, ದೌರ್ಜನ್ಯಗಳನ್ನ ನಡೆಸಲು ಆರಂಭಿಸಿದನು. ಈ ಸಂದರ್ಭದಲ್ಲಿ ಸ್ವಾಮಿ ರಮಾನಂದತೀರ್ಥರು ಈ ಪ್ರದೇಶದ ಜನರಿಗೆ ಚಳುವಳಿಗೆ ಧುಮುಕುವಂತೆ ಕರೆ ನೀಡಿ ವಿಮೋಚನೆಯ ಕಡೆಗೆ ಜನರ ಗಮನ ಸೆಳೆದರು.

ಬೀದರ್ ಜಿಲ್ಲೆ ಬಸವಕಲ್ಯಾಣ ತಾಲೂಕಿನ ಗೊರಟಾ(ಬಿ) ಗ್ರಾಮದಲ್ಲಿ ಹೈದರಾಬಾದ್ ನಿಜಾಮನ ರಜಾಕಾರರ ಸೇನೆ ದೇಶಭಕ್ತ ನಾಗರೀಕರನ್ನು ಹತ್ಯೆ ಮಾಡುವ ಮೂಲಕ ರಕ್ತದೋಕುಳಿಯನ್ನು ಹರಿಸಿತು. ಹಾಗಾಗಿ ಗೋರಟಾ (ಬಿ) ಗ್ರಾಮವನ್ನು ಕರ್ನಾಟಕದ ಜಲಿಯನ್ ವಾಲಾಬಾಗ್ ಎಂದು ನಾವು ಕರೆಯುತ್ತೇವೆ. ಇದೆಲ್ಲವನ್ನು ಅರಿತ ಅಂದಿನ ಗೃಹಸಚಿವರಾದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್‌ರವರು ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್‌ರವರ ಸಲಹೆಯ ಮೇರೆಗೆ ಹೈದರಾಬಾದ್ ಪ್ರಾಂತ್ಯದ ಮೇಲೆ “ಆಪರೇಷನ್ ಪೋಲೊ” ಪೋಲೀಸ್ ಕಾರ್ಯಾಚರಣೆ ಮಾಡುವ ಮೂಲಕ ಹೈದರಾಬಾದ್ ಕರ್ನಾಟಕದ ವಿಮೋಚನೆಗೆ ಸಹಕರಿಸಿದರು.

ಈ ಹೋರಾಟದಲ್ಲಿ ನಮ್ಮ-ನಮ್ಮ ಗ್ರಾಮ, ನಗರಗಳ ಸ್ಥಳಿಯ ಹೋರಾಟಗಾರರು ಅನೇಕ ತ್ಯಾಗ ಬಲಿದಾನಗಳನ್ನು ಮಾಡಿ ಆತ್ಮರ್ಪಣೆ ಮಾಡಿಕೊಳ್ಳುವ ಮೂಲಕ ನಮ್ಮ ಪ್ರದೇಶಕ್ಕೆ ಪೂರ್ಣ ಸ್ವತಂತ್ರ ದೊರಕಲು ಕಾರಣೀಭೂತರಾದರು. ಅವರ ತ್ಯಾಗ ಮತ್ತು ಬಲಿದಾನದ ಪ್ರಯುಕ್ತ ಅಂದಿನ ಹೈದರಾಬಾದ್ ಕರ್ನಾಟಕ ಇಂದಿನ ಕಲ್ಯಾಣ ಕರ್ನಾಟಕ ವಿಮೋಚನೆಗೊಳ್ಳುವ ಮೂಲಕ ನಮಗೆ ಸ್ವಾತಂತ್ರ‍್ಯದ ಬದುಕು ಲಭ್ಯವಾಗಿದೆ. ಹಾಗಾಗಿ ತ್ಯಾಗ ಬಲಿದಾನದ ಇತಿಹಾಸವನ್ನು ಪ್ರತಿಯೊಬ್ಬರೂ ನೆನಪಿಸಿಕೊಳ್ಳುವ ಮೂಲಕ ಹೊರಾಟವನ್ನು ಗೌರವಿಸುವುದನ್ನು ಕಲಿಯಬೇಕೆಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಉಪನ್ಯಾಸಕರಾದ ಗುರುಮೂರ್ತಿ, ಪ್ರಾಂಶುಪಾಲ ಬಸವರಾಜ್ ಸಿರಿಗೇರಿ ಹಾಗೂ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಮಂಜುಸ್ವಾಮಿ ಮುತ್ತಿನ ಪೆಂಡಿಮಠ ಮಾತನಾಡಿದರು.

ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಶಂಕರ್ ವರದಾಪುರ್, ಅಶೋಕ್, ಶರಣಬಸವ, ಬಸವನಗೌಡ, ವಿಶ್ವನಾಥ್, ರಮೇಶ್, ಶರಣಮ್ಮ, ರಾಹುಲ್ ಹಾಗೂ ಸಂಸ್ಥೆಯ ವಿದ್ಯಾರ್ಥಿ ವಿದ್ಯಾರ್ಥಿನಿಯರು ಬಾಗವಹಿಸಿದ್ದರು.

ಪತ್ರಕರ್ತರು ಸಾಮಾಜಿಕ ಜವಾಬ್ಧಾರಿ ಹೊಂದಿರಬೇಕು: ಕೆ. ನಿಂಗಜ್ಜ

ಗಂಗಾವತಿ: ನಗರದ ಐ.ಎಂ.ಎ ಹಾಲ್‌ನಲ್ಲಿ ಸೆಪ್ಟೆಂಬರ್-೨೨ ರಂದು ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘದ ಕೊಪ್ಪಳ ಜಿಲ್ಲಾ ಘಟಕದಿಂದ ಗಂಗಾವತಿ ತಾಲೂಕ ಘಟಕ ಉದ್ಘಾಟನೆ, ಪದಾಧಿಕಾರಿಗಳ ಪದಗ್ರಹಣ ಹಾಗೂ ವಿಶ್ವ ಪತ್ರಿಕಾ ದಿನಾಚರಣೆ ಕಾರ್ಯಕ್ರಮವು ಅಚ್ಚುಕಟ್ಟಾಗಿ ಜರುಗಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ರಾಜ್ಯಾಧ್ಯಕ್ಷರಾದ ಜಿ.ಎಂ ರಾಜಶೇಖರ ವಹಿಸಿ ಅವರು ಪ್ರಾಸ್ತಾವಿಕ ಮಾತನಾಡಿ, ಈ ಸಂಘಕ್ಕೆ ೭೦-೮೦ ವರ್ಷಗಳ ಇತಿಹಾಸವಿದ್ದು, ೧೯೩೬ ರಲ್ಲಿ ಕೇವಲ ತಾಲೂಕು ಸಂಘಟನೆಯಾಗಿ, ಸ್ವಾತಂತ್ರ್ಯಾ ನಂತರ ಆಗಿನ ಮುಖ್ಯಮಂತ್ರಿಗಳಾದ ನಿಜಲಿಂಗಪ್ಪ ಅವರಿಂದ ಜಿಲ್ಲಾ ಸಂಘವಾಗಿ, ಈಗ ರಾಜ್ಯಮಟ್ಟದ ಸಂಘವಾಗಿ ಬೆಳೆದಿದೆ. ಇತ್ತೀಚೆಗೆ ಈ ಸಂಘವು ಉದ್ಘಾಟನೆಗೊಂಡು ರಾಜ್ಯದಲ್ಲಿ ಮೈಸೂರು, ದಕ್ಷಿಣ ಕರ್ನಾಟಕ, ಉತ್ತರ ಕರ್ನಾಟಕ ಹಾಗೂ ಬೆಂಗಳೂರು ಎಂದು ನಾಲ್ಕು ಭಾಗಗಳನ್ನಾಗಿ ಮಾಡಿಕೊಂಡು ಸಂಘಟನೆಯನ್ನು ಬೆಳೆಸುವ ಮೂಲಕ ಪತ್ರಕರ್ತರ ಸಮಸ್ಯೆಗಳು, ಅವರ ಮೇಲಾಗುತ್ತಿರುವ ಕಿರುಕುಳಗಳು, ಅವರ ಆರ್ಥಿಕ ಪರಿಸ್ಥಿತಿ ಹಾಗೂ ಸರ್ಕಾರದಿಂದ ಅವರಿಗೆ ಸಿಗಬೇಕಾದ ಭದ್ರತೆಯ ಕುರಿತಾಗಿ ಸರ್ಕಾರದ ಮಟ್ಟದಲ್ಲಿ ಗಮನಕ್ಕೆ ತರಲು ಸಂಘವು ಸಿದ್ಧವಾಗಿದೆ ಎಂದು ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಭಾಗವಹಿಸಿದ್ದ ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯರಾದ ಕೆ. ನಿಂಗಜ್ಜ ಅವರು ಮಾತನಾಡಿ, ಪತ್ರಿಕಾ ಮಾಧ್ಯಮದ ಇತಿಹಾಸ ಕುರಿತು ತಿಳಿಸುತ್ತಾ, ಮಾದ್ಯಮ ಅಕಾಡೆಮಿಯಿಂದ ಹಮ್ಮಿಕೊಳ್ಳಲಾಗುತ್ತಿರುವ ಕಾರ್ಯಕ್ರಮಗಳ ಕುರಿತಾಗಿ ಮಾಹಿತಿ ನೀಡಿ, ಪತ್ರಕರ್ತರು ಸಾಮಾಜಿಕ ಜವಾಬ್ಧಾರಿ ಹೊಂದಿರಬೇಕು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪತ್ರಿಕಾ ರಂಗಕ್ಕೆ ಬಹಳ ಪ್ರಾಮುಖ್ಯತೆ ಇದ್ದು, ಅದರ ಪ್ರಾಮುಖ್ಯತೆಯನ್ನು ಪತ್ರಕರ್ತರು ಉಳಿಸಿಕೊಂಡು ಹೋಗಬೇಕು. ಈಗಿನ ಆಧುನಿಕ ಜಗತ್ತಿನಲ್ಲಿ ಎಷ್ಟೇ ಸಾಮಾಜಿಕ ಜಾಲತಾಣ ಅಭಿವೃದ್ಧಿ ಹೊಂದಿದ್ದರೂ, ಮುದ್ರಣಾ ಮಾಧ್ಯಮಕ್ಕೆ ಅದರದೇ ಆದ ಮಹತ್ವ ಹಾಗೂ ಪ್ರಾಮುಖ್ಯತೆ ಇದೆ ಎಂದು ಉಪನ್ಯಾಸ ನೀಡಿದರು.

ಇದೇ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಮಾಜಿ ಶಾಸಕ ಪರಣ್ಣ ಮುನವಳ್ಳಿಯವರು, ನಗರಸಭೆಯ ಅಧ್ಯಕ್ಷೆಯಾದ ಶ್ರೀಮತಿ ಹೀರಾಬಾಯಿ ಸಿಂಗ್, ಬಿಜೆಪಿ ಮುಖಂಡರಾದ ವಿರುಪಾಕ್ಷಪ್ಪ ಸಿಂಗನಾಳ, ಮಾಜಿ ಕಾಡಾ ಅಧ್ಯಕ್ಷ ತಿಪ್ಪೇರುದ್ರಸ್ವಾಮಿ ವಕೀಲರು, ಜಿ. ಶ್ರೀಧರ ಕೇಸರಹಟ್ಟಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಉಪಾಧ್ಯಕ್ಷ ಎಸ್.ಬಿ ಖಾದ್ರಿ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಹೆಚ್.ಬಿ. ನಟೇಶ್, ಲಿಟಲ್ ಹಾರ್ಟ್ಸ್ ಶಾಲೆಯ ಕಾರ್ಯದರ್ಶಿ ಜಗನ್ನಾಥ ಆಲಂಪಲ್ಲಿ, ಹಿರಿಯ ಕಾರ್ಮಿಕ ಮುಖಂಡ ಜೆ. ಭಾರಧ್ವಾಜ್, ಕಾಂಗ್ರೆಸ್ ಮುಖಂಡ ಎಸ್.ಬಿ ಖಾದ್ರಿ, ಕನ್ನಡಪರ ಸಂಘಟನೆ ಮುಖಂಡ ಸೈಯ್ಯದ್ ಜಿಲಾನಿ ಪಾಷಾ ಖಾದ್ರಿ, ದಲಿತಪರ ಸಂಘಟನೆಗಳ ಮುಖಂಡರಾದ ಹುಲುಗಪ್ಪ ಮಾಗಿ, ಹಂಪೇಶ ಹರಿಗೋಲು, ಶಂಕರ್, ಹುಸೇನಪ್ಪ ಹಂಚಿನಾಳ, ಮಂಜುನಾಥ ಕಳ್ಳಿಮನಿ ಸೇರಿದಂತೆ ಇನ್ನಿತರರು ಪತ್ರಕರ್ತರು ಎದುರಿಸುತ್ತಿರುವ ಸವಾಲುಗಳ ಕುರಿತು ಮಾತನಾಡಿದರು.

ಈ ಕಾರ್ಯಕ್ರಮದಲ್ಲಿ ಸಂಘದ ಕೊಪ್ಪಳ ಜಿಲ್ಲಾಧ್ಯಕ್ಷರಾದ ರಮೇಶ ಕೋಟಿಯವರಿಗೆ ರಾಜ್ಯಾಧ್ಯಕ್ಷರು ನೇಮಕಾತ್ರಿ ಪತ್ರ ವಿತರಣೆ ಮಾಡಿದರು. ಅದೇರೀತಿ ಗಂಗಾವತಿ ತಾಲೂಕು ಅಧ್ಯಕ್ಷ ಸಿ.ಡಿ ರಾಮಕೃಷ್ಣ ಹಾಗೂ ಪ್ರಧಾನ ಕಾರ್ಯದರ್ಶಿ ಚನ್ನಬಸವ ಮಾನವಿ ಅವರುಗಳಿಗೆ ಜಿಲ್ಲಾ ಘಟಕದಿಂದ ನೇಮಕಾತಿ ಪತ್ರ ನೀಡಲಾಯಿತು.

ಈ ಸಂದರ್ಭದಲ್ಲಿ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ವಸಂತಕುಮಾರ, ರಾಜ್ಯ ಪದಾಧಿಕಾರಿಯಾದ ಪ್ರಶಾಂತ್ ರವರು ಹಾಗೂ ರಾಜ್ಯ ಸಮಿತಿ ಸದಸ್ಯರಾದ ಹೆಚ್. ಮಲ್ಲಿಕಾರ್ಜುನ ಹೊಸಕೇರಾ, ಗಂಗಾವತಿ ಲಯನ್ಸ್ ಕ್ಲಬ್ ಅಧ್ಯಕ್ಷರಾದ ಡಾ|| ಶಿವಕುಮಾರ ಮಾಲಿಪಾಟೀಲ್ ಉಪಸ್ಥಿತರಿದ್ದರು.

ಸಂಘದ ಕೊಪ್ಪಳ ಜಿಲ್ಲಾ ಘಟಕದಿಂದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಎಲ್ಲರಿಗೂ ಸನ್ಮಾನಿಸಿ ಗೌರವಿಸಲಾಯಿತು. ಕೊನೆಯಲ್ಲಿ ರಾಜ್ಯ ಘಟಕದಿಂದ ಮಾಧ್ಯಮಶ್ರೀ ಪ್ರಶಸ್ತಿ ಪುರಸ್ಕೃತ ಮಲ್ಲಿಕಾರ್ಜುನ ಹೊಸಕೇರಾ ಅವರಿಗೆ ಹಾಗೂ ಕೊಪ್ಪಳ ಜಿಲ್ಲಾಧ್ಯಕ್ಷ ರಮೇಶ ಕೋಟಿ ಅವರಿಗೆ ಹಾಗೂ ಗಂಗಾವತಿ ತಾಲೂಕಿನ ಎಲ್ಲಾ ಪದಾಧಿಕಾರಿಗಳಿಗೆ ಸನ್ಮಾನಿಸಲಾಯಿತು.

ವಿವಿಧ ಜಿಲ್ಲೆ, ವಿವಿಧ ತಾಲೂಕು ಹಾಗೂ ಗ್ರಾಮೀಣ ಪ್ರದೇಶಗಳಿಂದ ಕರ್ನಾಟಕ ಮಾದ್ಯಮ ಪತ್ರಕರ್ತರ ಸಂಘದ ಪದಾಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಶಿಕ್ಷಕರಾದ ಶಿವಾನಂದ ತಿಮ್ಮಾಪುರ ನಿರೂಪಿಸಿದ ಈ ಕಾರ್ಯಕ್ರಮದಲ್ಲಿ ರಮೇಶ ಕೋಟಿ ಸ್ವಾಗತಿಸಿದರೆ, ಜೆ. ಶ್ರೀನಿವಾಸ ವಂದನಾರ್ಪಣೆ ಸಲ್ಲಿಸಿದರು.

ನೂತನವಾಗಿ ರಚನೆಗೊಂಡ ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘಕ್ಕೆ ಪತ್ರಿಕಾ ಭವನವನ್ನು ಒದಗಿಸಿಕೊಡಲು ಶಾಸಕರಿಗೆ ಮನವಿ.

ಗಂಗಾವತಿ: ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘವು ಇತ್ತೀಚೆಗೆ ರಾಜ್ಯಮಟ್ಟದಲ್ಲಿ ರಚನೆಯಾಗಿ ಉದ್ಘಾಟನೆಗೊಂಡು, ಈ ಸಂಘದ ಅಂಗಸಂಸ್ಥೆಗಳಾಗಿ ಹಲವು ಜಿಲ್ಲಾ ಸಮಿತಿಗಳು ಹಾಗೂ ತಾಲ್ಲೂಕು ಸಮಿತಿಗಳು ಈಗಾಗಲೇ ರಚನೆಯಾಗಿವೆ. ಅದರಂತೆ ನಮ್ಮ ಗಂಗಾವತಿ ತಾಲ್ಲೂಕು ಸಮಿತಿಯೂ ಕೂಡ ಸಕ್ರಿಯಗೊಂಡಿದ್ದು ಮತ್ತು ನಮ್ಮ ಸಂಘದಿಂದ ಪತ್ರಿಕಾಗೋಷ್ಠಿಗಳನ್ನು ನಡೆಸಲು ಸೂಕ್ತ ಸ್ಥಳಾವಕಾಶದ ಅಗತ್ಯವಿದೆ. ಕೂಡಲೇ ನಮ್ಮ ಸಂಘಕ್ಕೆ ಪತ್ರಿಕಾ ಭವನದ (PRESS HALL) ವ್ಯವಸ್ಥೆ ಕಲ್ಪಿಸಿಕೊಡಬೇಕೆಂದು ಸೆಪ್ಟೆಂಬರ್-೧೭ ರಂದು ಹೈದ್ರಾಬಾದ್-ಕರ್ನಾಟಕ ವಿಮೋಚನಾ ದಿನಾಚರಣೆ ಅಂಗವಾಗಿ ನಡೆದ ತಾಲೂಕ ಸಾರ್ವಜನಿಕ ಧ್ವಜಾರೋಹಣದ ಸಂದರ್ಭದಲ್ಲಿ ಶಾಸಕರಾದ ಜನಾರ್ಧನರೆಡ್ಡಿಯವರಿಗೆ ಮನವಿ ಸಲ್ಲಿಸಲಾಯಿತು ಎಂದು ಸಂಘದ ಗಂಗಾವತಿ ತಾಲೂಕ ಅಧ್ಯಕ್ಷರಾದ ಸಿ.ಡಿ ರಾಮಕೃಷ್ಣ ತಿಳಿಸಿದರು.

ಮನವಿ ಸಲ್ಲಿಸಿ ಮಾತನಾಡಿದ ಅವರು ಪ್ರಸ್ತುತ ನಮಗೆ ಯಾವುದೇ ಸ್ವಂತ ಕಟ್ಟಡ ಅಥವಾ ಸಭಾಂಗಣವಿಲ್ಲದ ಕಾರಣದಿಂದಾಗಿ, ವಿವಿಧ ಸಭೆ ಹಾಗೂ ಚಟುವಟಿಕೆಗಳನ್ನು ಸರಿಯಾದ ರೀತಿಯಲ್ಲಿ ನಡೆಸಲು ತೊಂದರೆ ಅನುಭವಿಸುತ್ತಿದ್ದೇವೆ. ದಯವಿಟ್ಟು ನಿಮ್ಮ ಸರಕಾರಿ ಕಚೇರಿ ವ್ಯಾಪ್ತಿಯಲ್ಲಿ ಪತ್ರಿಕಾ ಭವನವನ್ನು ಒದಗಿಸಿಕೊಡಬೇಕಾಗಿ ಶಾಸಕರಲ್ಲಿ ವಿನಂತಿಸಿಕೊಂಡರು. ಇದರಿಂದ ತಾಲ್ಲೂಕು ಮಟ್ಟದ ಪತ್ರಿಕೋದ್ಯಮ ಚಟುವಟಿಕೆಗಳಿಗೆ ಸೇರಿದಂತೆ ಪತ್ರಕರ್ತರಿಗೆ ಒಂದು ಕಾರ್ಯಾಲಯದ ವ್ಯವಸ್ಥೆ ಸಿಕ್ಕಂತಾಗುತ್ತದೆ. ಆದಷ್ಟು ಬೇಗ ನಮಗೆ ಪತ್ರಿಕಾ ಭವನ ವ್ಯವಸ್ಥೆ ಮಾಡಿಕೊಡಬೇಕೆಂದು ಸಂಘಟನೆಯ ಎಲ್ಲಾ ಪದಾಧಿಕಾರಿಗಳೊಂದಿಗೆ ಮನವಿ ಸಲ್ಲಿಸಲಾಗಿದೆ ಎಂದರು.

ಮನವಿ ಸ್ವೀಕರಿಸಿದ ಶಾಶಕರು, ನಿಮಗೆ ಆದಷ್ಟು ಬೇಗನೇ ಪತ್ರಿಕಾ ಭವನದ ವ್ಯವಸ್ಥೆ ಮಾಡಿಕೊಡುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷರಾದ ರಮೇಶ್ ಕೋಟೆ. ಗಂಗಾವತಿ ತಾಲೂಕ ಪ್ರಧಾನ ಕಾರ್ಯದರ್ಶಿಗಳಾದ ಆರ್ ಚನ್ನಬಸವ ಮಾನ್ವಿ, ಸದಸ್ಯರಾದ ಮಂಜುನಾಥ ವಣಗೇರಿ ಸೇರಿದಂತೆ ನಮ್ಮ ಸಂಘಕ್ಕೆ ಬೆಂಬಲ ನೀಡಿದ ಸುರೇಶ ಹಾಗೂ ಇತರ ಸದಸ್ಯರು ಇದ್ದರು.

ಕನಕಗಿರಿಯಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಯ ಪ್ರಯುಕ್ತ ಧ್ವಜಾರೋಹಣ

ಇಂದು ಕನಕಗಿರಿ ತಾಲೂಕು ಪಂಚಾಯತ್‌ ಆವರಣದಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಯ ಪ್ರಯುಕ್ತ ಧ್ವಜಾರೋಹಣ ಕಾರ್ಯಕ್ರಮವನ್ನು ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿಗಳಾದ ಕೆ. ರಾಜಶೇಖರ್‌ ಅವರು ನೆರವೇರಿಸಿದರು.

ಈ ವೇಳೆ ಗ್ಯಾರಂಟಿ ಯೋಜನೆಯ ಅಧ್ಯಕ್ಷರು, ಕೆಡಿಪಿ ಸದಸ್ಯರು, ತಾ.ಪಂ ಅಧಿಕಾರಿಗಳು, ಸಿಬ್ಬಂದಿಗಳು ಹಾಜರಿದ್ದರು.

ನಾಟಕಕಾರ ಗೊರೂರು ಅನಂತರಾಜು ಅವರಿಗೆ ಬೆಂಗಳೂರು ಗೆಜ್ಜೆ ಹೆಜ್ಜೆ ರಂಗತಂಡದಿಂದ ರಂಗ ಪುರಸ್ಕಾರ

ಬೆಂಗಳೂರಿನ ಚಲನಚಿತ್ರ ಹಾಸ್ಯನಟರು ಮೈಸೂರು ರಮಾನಂದ್ ಸಾರಥ್ಯದ ಹೆಜ್ಜೆ ಗೆಜ್ಜೆ ರಂಗ ತಂಡದ 50ನೇ ವರ್ಷದ ಪಾದಾರ್ಪಣೆಯ ಸಂಭ್ರಮ ನಡೆಯಿತು.

ಹಾಗೂ, ಆಶಾನಾದಿ ಭಾರತರತ್ನ ಡಾ.ಬಿ.ಆರ್.ಅಂಬೇಡ್ಕರ್ ಮಕ್ಕಳ ನಾಟಕ ಕೃತಿ ಲೋಕಾರ್ಪಣಿ, ರಂಗ ಸಂಗೀತ, ನಾಟಕ ಪ್ರದರ್ಶನ ಕಾರ್ಯಕ್ರಮ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಿತು.

ಹಾಸನದ ಸಾಹಿತಿಗಳು, ನಾಟಕಕಾರರು ಶ್ರೀ ಗೊರೂರು ಅನಂತರಾಜುರವರ ಕಲಾ ಸೇವೆ ಸಾಂಸ್ಕೃತಿಕ ಸಂಘಟನೆ, ನಾಟಕ, ಸಾಹಿತ್ಯ ಸೇವೆ ಗುರುತಿಸಿ ರಂಗ ಪುರಸ್ಕಾರವನ್ನು ಹೆಜ್ಜೆ ಗೆಜ್ಜೆ ತಂಡದ ಸಂಸ್ಥಾಪಕ ಅಧ್ಯಕ್ಷರು ಮತ್ತು ಚಲನಚಿತ್ರ ನಟರು ಶ್ರೀ ಮೈಸೂರು ರಮಾನಂದ್ ಅವರು ನೀಡಿ ಸನ್ಮಾನಿಸಿದರು.

ಸಾಹಿತ್ಯ ಕ್ಷೇತ್ರದಲ್ಲಿ 50ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದಾರೆ.

ತಮ್ಮ ಕ್ರಿಯಾಶೀಲ ವ್ಯಕ್ತಿತ್ವದಿಂದ ರಂಗಭೂಮಿ ನಟರು, ಗಾಯಕರು, ನೃತ್ಯ ಚಿತ್ರ ಕಲಾವಿದರು ಪ್ರತಿಭ್ವಾನಿತ ಕಲಾವಿದರನ್ನು ಸಂದರ್ಶಿಸಿ ಪತ್ರಿಕೆಗಳ ಮೂಲಕ ಜನತೆಗೆ ಪರಿಚಯಿಸುವ ಸದಾ ಚಟುವಟಿಕೆಯಲ್ಲಿ ಕ್ರಿಯಾಶೀಲರಾಗಿದ್ದಾರೆ.

ಲೇಖಕರು ಕರ್ನಾಟಕ ರಾಜ್ಯ ಬರಹಗಾರರ ಸಂಘ, ಹೂವಿನ ಹಡಗಲಿ ರಾಜ್ಯ ಸಾಹಿತ್ಯ ಸಾಂಸ್ಕೃತಿಕ ಸಂಘಟನೆಯ ಗೌರವ ಅಧ್ಯಕ್ಷರು ಶ್ರೀ ಗೊರೂರು ಅನಂತರಾಜು.

ಅವರ ಸಾಹಿತ್ಯ ಮತ್ತು ಸಾಂಸ್ಕೃತಿಕ ಸೇವೆ ಸಮಾಜಕ್ಕೆ ಇನ್ನೂ ಹೆಚ್ಚಿನದಾಗಿ ದೊರೆಯಲೆಂದು ಶುಭ ಹಾರೈಸಿದರು.

ಕರ್ನಾಟಕ ರಾಜ್ಯ ಬರಹಗಾರರ ಸಂಘ, ಹೂವಿನ ಹಡಗಲಿ ರಾಜ್ಯಾಧ್ಯಕ್ಷರು ಶ್ರೀ ಮಧು ನಾಯ್ಕ್ ಲಂಬಾಣಿಯವರು ಅಭಿನಂದಿಸಿದ್ದಾರೆ.

ಮಹಾನ್ ಕಿಡ್ಸ್ ಶಾಲೆಯಲ್ಲಿ ಇಂಜಿನಿಯರ್ ದಿನಾಚರಣೆ.

ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವನೆ ಬೆಳೆಸುವುದೇ ದಿನಾಚರಣೆಯ ಮೂಲ ಉದ್ದೇಶ… ನೇತ್ರಾಜ ಗುರುವಿನ ಮಠ.

ಗಂಗಾವತಿ: ಭಾರತ ರತ್ನ ಸಿವಿಲ್ ಇಂಜಿನಿಯರ್ ಸರ್ ಎಂ ವಿಶ್ವೇಶ್ವರಯ್ಯನವರ ಜನ್ಮ ದಿನಾಚರಣೆಯನ್ನು ದೇಶಾದ್ಯಂತ ಸಪ್ಟೆಂಬರ್ 15ರಂದು ಆಚರಿಸಲಾಗುತ್ತಿದೆ.

ಇದರ ಮೂಲ ಉದ್ದೇಶ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವನೆ ಹಾಗೂ ಸಂಶೋಧನೆ ಬೆಳೆಸುವುದು ಎಂದು ಮಹಾನ್ ಕಿಡ್ಸ್ ಆಂಗ್ಲ ಮಾಧ್ಯಮ ಶಾಲೆಯ ಅಧ್ಯಕ್ಷ ನೇತ್ರಾಜ ಗುರುವಿನ ಮಠ ಹೇಳಿದರು.

ಅವರು ಶಾಲೆಯಲ್ಲಿ ಇಂಜಿನಿಯರ್ಸ್ ಡೇ ಆಚರಣೆ ಪ್ರಯುಕ್ತ ಸರ್ ಎಂ ವಿಶ್ವೇಶ್ವರಯ್ಯ ರವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಚಾಲನೆ ನೀಡಿ ಮಾತನಾಡುತ್ತಾ ಭಾರತವು ವೈಜ್ಞಾನಿಕ ಕ್ಷೇತ್ರದಲ್ಲಿ ದಿಟ್ಟ ಹೆಜ್ಜೆ ಇಡುವುದರ ಮೂಲಕ ಸಾಧನೆಯ ಹಾದಿಯಲ್ಲಿದೆ ಎಂಬುದಕ್ಕೆ ಇತ್ತೀಚಿನ ಉಡಾವಣೆಗಳು ಸಾಕ್ಷಿಯಾಗಿದೆ.

ಭೂಗೋಳ, ಖಗೋಳ, ಸೂರ್ಯ-ಚಂದ್ರ, ಹಗಲು-ರಾತ್ರಿ, ಗ್ರಹಣ ಮತ್ತಿತರ ವಿಷಯಗಳನ್ನು ಶಾಲಾ ವಿದ್ಯಾರ್ಥಿಗಳಿಗೆ ತಿಳಿ ಹೇಳುವ ಕಾರ್ಯ ನಡೆಸಲಾಗುತ್ತದೆ ಎಂದು ಹೇಳಿದರು.

ಶಾಲಾ ಮುಖ್ಯೋಪಾಧ್ಯಾಯಿನಿ ಸವಿತಾ ನೇತ್ರಾಜ ಗುರುವಿನ ಮಠ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿ ಗೊತ್ತಿದ್ದ ವಿಷಯದಿಂದ ಗೊತ್ತಿಲ್ಲದ ವಿಷಯಗಳ ಕಡೆಗೆ ಸಾಗುವುದೇ ದಿನಾಚರಣೆಯ ಮೂಲ ಉದ್ದೇಶ ಎಂದು ಹೇಳಿದರು.

ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುವುದರ ಮೂಲಕ ವಿಶ್ವದ ವಿಸ್ಮಯಗಳನ್ನು ಗುರುಗಳ ಮಾರ್ಗದರ್ಶನದಲ್ಲಿ ಕಳಿಸಲಾಗುತ್ತದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ವೈಜ್ಞಾನಿಕ ಮಾದರಿಯ ವಸ್ತು ಪ್ರದರ್ಶನವನ್ನು ಪ್ರದರ್ಶಿಸಿದರು.. ಶಾಲಾ ಶಿಕ್ಷಕರಾದ ಚಂಪಾರಾಣಿ ಕು ಮುದಿನಿ ಸಹನಾ, ಪೂರ್ಣಿಮಾ, ಗೌಶಿಯ ಶಿಕ್ಷಕರು ಸೇರಿದಂತೆ ಪಾಲಕರುಗಳಾದ ಸುನಿಲ್ ವೈದ್ಯ, ವೆಂಕಟೇಶ, ಲತಾ, ಅಪಾರ ಪಾಲಕರು ಪಾಲ್ಗೊಂಡಿದ್ದರು.

ಜಂಗಮರ ಕಲ್ಗುಡಿ ಹಾಗೂ ಮರಳಿ ಗ್ರಾಮಗಳಲ್ಲಿ ಯಶಸ್ವಿಯಾಗಿ ನಡೆದ ನಿರ್ಮಲ ತುಂಗಭದ್ರಾ ಅಭಿಯಾನದ ಪೂರ್ವಭಾವಿ ಸಭೆ

ಗಂಗಾವತಿ: ಶನಿವಾರ ಸಾಯಂಕಾಲ ಕಲ್ಗುಡಿ ಗ್ರಾಮದ ಬೆಟ್ಟದ ಲಿಂಗೇಶ್ವರ ದೇವಾಲಯದಲ್ಲಿ ಪೂರ್ವಭಾವಿ ಸಭೆ ನಡೆಯಿತು.

ಮುಖಂಡರಾದ ಪ್ರಸಾದ್ ಅವರು ಮಾತನಾಡಿ ತುಂಗಭದ್ರಾ ನದಿಯ ಋಣದಲ್ಲಿ ನಾವಿದ್ದೇವೆ, ಆ ಪಾದಯಾತ್ರೆಯಲ್ಲಿ ಎಲ್ಲಾ ಯುವಕರು, ರೈತರು ಸಕ್ರಿಯವಾಗಿ ಪಾಲ್ಗೊಳ್ಳುವುದಾಗಿ ತಿಳಿಸಿದರು.

ಮರಳಿ ಗ್ರಾಮದ ಬೊಳೋಡಿ ಬಸವೇಶ್ವರ ಸಮುದಾಯ ಭವನದಲ್ಲಿ ನಿರ್ಮಲ ತುಂಗಭದ್ರಾ ಅಭಿಯಾನದ ಪಾದಯಾತ್ರೆ ಯಶಸ್ವಿಗೊಳಿಸಲು ಸಂಪೂರ್ಣ ಸಹಕಾರ ನೀಡುವುದಾಗಿ ಸಭೆಯಲ್ಲಿ ಪಾಲ್ಗೊಂಡ ಮುಖಂಡರಾದ ರಮೇಶ್ ಕುಲಕರ್ಣಿ ತಿಳಿಸಿದರು.

ಉಭಯ ಸಭೆಗಳಲ್ಲಿ ನಿರ್ಮಲ ತುಂಗಭದ್ರಾ ಅಭಿಯಾನ ಸಮತಿಯ ಪ್ರಮುಖರಾದ ಶ್ರೀ ಜಗನ್ನಾಥ ಅಲ್ಲಂಪಲ್ಲಿ, ಮಹಮ್ಮದ್ ರಫಿ, ಡಾ|| ಶಿವಕುಮಾರ್ ಮಾಲಿಪಾಟೀಲ್, ಅರ್ಜುನ್, ಶರಣಬಸವರಾಜ ರೆಡ್ಡಿ, ಯಮನೂರಪ್ಪ ನಾಯಕ್, ಧನಂಜಯ ಉಪ್ಪಾರ, ಗಾದಿಲಿಂಗಪ್ಪ, ವೆಂಕೋಬ ಮೇಲಕ್ರಿ, ನಿರುಪಾದೆಪ್ಪ, ಶರಣಪ್ಪ ಡಿ., ವಿರೇಶಪ್ಪ ಲಕೋಟಿ, ಯಮನೂರಪ್ಪ ನಾಯಕ, ಮನ್ಸೂರ್ ಬೆಗ್, ಮೌಲಾಹುಸೇನ್, ದ್ಯಾಮಣ್ಣ ಹಾಗೂ ಗ್ರಾಮದ ರೈತರು ಉಪಸ್ಥಿತರಿದ್ದರು.

ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಮಹಾನ್ ಕಿಡ್ಸ್ ಶಾಲೆಯ ವಿದ್ಯಾರ್ಥಿಗಳ ಸಾಧನೆ.

ಗಂಗಾವತಿ: ಸೆಪ್ಟೆಂಬರ್-೧೧ ರಂದು ಕೊಪ್ಪಳದ ಜಿಲ್ಲಾ ಕ್ರೀಡಾಂಗಣದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆ ಹಮ್ಮಿಕೊಳ್ಳಲಾಯಿತು.

ಈ ಸ್ಪರ್ಧೆಯಲ್ಲಿ ಗಂಗಾವತಿ ತಾಲೂಕಿನ ಮಹಾನ್ ಕಿಡ್ಸ್ ಶಾಲೆಯ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿದ್ದಾರೆ ಎಂದು ಶಾಲೆಯ ಅಧ್ಯಕ್ಷರಾದ ನೇತ್ರಾಜ್ ಗುರುವಿನಮಠ ಸಂತಸ ವ್ಯಕ್ತಪಡಿಸಿದರು.

ಕರಾಟೆ ಸ್ಪರ್ಧೆಯ ಪ್ರಾಥಮಿಕ ವಿಭಾಗದಲ್ಲಿ ಶಿವರಾಜ್-೩೫ ಕೆ.ಜಿ ವಿಭಾಗದಲ್ಲಿ ಪ್ರಥಮ ಮತ್ತು ಬಾಲಕಿಯರ ಪ್ರೌಢ ವಿಭಾಗದಲ್ಲಿ ಮೀನಾಕ್ಷಿ -೩೬ ಕೆ.ಜಿ ವಿಭಾಗದಲ್ಲಿ ಪ್ರಥಮ ಸ್ಥಾನ ಬಾಲಕರ ಪ್ರೌಢ ವಿಭಾಗದಲ್ಲಿ ಮಹೇಶ್-೩೫ ಕೆ.ಜಿ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ಮುಂದೆ ನಡೆಯುವ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಈ ವಿದ್ಯಾರ್ಥಿಗಳಿಗೆ ಶಾಲೆಯ ಆಡಳಿತ ಮಂಡಳಿ, ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗ ಅಭಿನಂದನೆಗಳನ್ನು ತಿಳಿಸಿದ್ದಾರೆ.