ಹಾಸ್ಯ ನಟ ಬಹುಮುಖ ಪ್ರತಿಭೆಯ ಮೈಸೂರು ರಮಾನಂದ್.

ಕರ್ನಾಟಕದ ರಂಗಭೂಮಿಯ ಪರಂಪರೆ ಕನ್ನಡಿಗರ ವಾಸ್ತವ ಬದುಕನ್ನು ಸಮರ್ಥವಾಗಿ ಪ್ರತಿನಿಧಿಸುತ್ತಲೇ ಬಂದಿದೆ. ಆಧ್ಯಾತ್ಮಿಕ, ಪೌರಾಣಿಕ, ಐತಿಹಾಸಿಕ, ಸಾಮಾಜಿಕ, ವಿಡಂಬನೆ, ಸಮಕಾಲೀನ ಸಮಸ್ಯೆ….. ಹೀಗೆ ರಂಗಭೂಮಿಯಿಂದ ಆಗಿರುವ ಜೀವನಕ್ರಾಂತಿ ಬಹು ದೊಡ್ಡದು. ಜನಮಾನಸವನ್ನು ಈ ರೀತಿಯಾಗಿ ಸದಾ ಚಾಲನೆಯಲ್ಲಿ ಇರಿಸಿದ ದೃಷ್ಟಿಯಿಂದ ರಂಗಭೂಮಿಯನ್ನು ಜವಾಬ್ದಾರಿಯಿಂದ ಬೆಳಸಿದ ಮಹಾನ್ ಕಲಾವಿದರ ಪರಂಪರೆಗೆ ದೊಡ್ಡ ಗೌರವ ಸಲ್ಲಲೇಬೇಕಿದೆ. ಇಂತಹ ಮಹಾನ್ ರಂಗಕಲಾವಿದರಲ್ಲಿ ಸಮರ್ಪಣೆಯ ರಂಗ ಕಲಾವಿದ ಮೈಸೂರು ರಮಾನಂದ್ ಕೂಡ ಒಬ್ಬರು.

ಸುಮಾರು 70 ವರ್ಷ ವಯಸ್ಸಿನ ಮೈಸೂರು ರಮಾನಂದ್ ಅವರು ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ಜನಿಸಿದವರು. ನಾಡಿನ ಸಾಂಸ್ಕೃತಿಕ ಸೊಗಡನ್ನು ತಮ್ಮ ವ್ಯಕ್ತಿತ್ವದಲ್ಲಿ ಅಳವಡಿಸಿಕೊಂಡವರು. ನಿರಂತರ 50 ವರ್ಷಗಳಿಂದ ನಾಡಿನಾದ್ಯಂತ ಸಂಚರಿಸಿ ರಂಗಭೂಮಿಯಲ್ಲಿ ಬಹುಮುಖಿ ವೇಷಗಳಿಂದ, ಬಹುಮುಖ ಪ್ರತಿಭೆಯಿಂದ ಮೆರೆದವರು. ಬಹುವಿಭಾಗ ಸಿನಿಮಾ, ರಂಗ ನಿರ್ವಹಣೆಯಿಂದ ಕರ್ನಾಟಕ ರಮಾರಮಣರೆನಿಸಿದವರು.

ಕನ್ನಡದ ಹೆಮ್ಮೆಯ ವರನಟ ಡಾ.ರಾಜಕುಮಾರ್, ಡಾ.ಹಾ.ಮಾ.ನಾಯಕ್, ಡಾ.ಬಿ.ವಿ.ಕಾರಂತ್ ಮೊದಲಾದ ದಿಗ್ಗಜರು ರಮಾನಂದರ ರಂಗಕಲೆಯ ಕಾಯಕವನ್ನು ಮೆಚ್ಚಿಕೊಂಡವರಾಗಿದ್ದಾರೆ. ನಾಡಿನ ಹಲವು ಪತ್ರಿಕೆಗಳು ಮೈಸೂರು ರಮಾನಂದರ 50 ವರ್ಷಗಳ ರಂಗ ಸೇವೆಯ ಬರಹ ಪ್ರಕಟಿಸಿವೆ. ನಾಡಿನ ರಂಗ ದಿಗ್ಗಜರು ಸಾಹಿತಿ ಕಲಾವಿದರು ರಮಾನಂದ ಅವರ ಪ್ರತಿಭಾ ಸಂಪನ್ನ ಸಾಧನೆಯನ್ನು ರಂಗ ಬೆನ್ನು ತಟ್ಟಿ ಉತ್ತೇಜಿಸಿದ್ದಾರೆ. ನಟ, ನಿರ್ದೇಶಕ, ರಚನಕಾರ, ಪ್ರಕಾಶಕ, ಗೆಜ್ಜೆ ಹೆಜ್ಜೆ ರಂಗ ತಂಡ ಸಂಸ್ಥಾಪಕ, ಪತ್ರಕರ್ತ, ಪ್ರಯೋಗ ಶೀಲ ನಾಟಕಕಾರ, ರಂಗ ಸಂಚಾರಿ… ಹೀಗೆ ವಿವಿಧ ಆಯಾಮಗಳ ಬಹುಮುಖಿ ಸಾಧಕ ಮೈಸೂರು ರಮಾನಂದರು.

ಇವರು ಗೆಳೆಯರೊಂದಿಗೆ ಆರಂಭಿಸಿದ ವಾಸ್ತವ ಜೀವನದ ಸಮಸ್ಯೆಗಳು ಮತ್ತದರ ಪರಿಹಾರಗಳನ್ನು ತಿಳಿಸುವ ಬೀದಿ ನಾಟಕಗಳು ಸಾವಿರಕ್ಕೂ ಹೆಚ್ಚು ಪ್ರದರ್ಶನ ನೀಡಿ ದಾಖಲೆ ನಿರ್ಮಿಸಿದೆ. ರಂಗಭೂಮಿಯ ವಿಶ್ವಪ್ರಜ್ಞೆಯನ್ನು ಯಶಸ್ವಿಯಾಗಿ ಸಾರುತ್ತಿರುವ ಮೈಸೂರು ರಮಾನಂದ ಅವರು ಕ್ರಿಯಾಶೀಲತೆಯಲ್ಲಿ, ಸಾಮಾಜಿಕ ಕಳಕಳಿಯ ಬದ್ಧತೆಯಲ್ಲಿ ಸದಾ ಮುಂಚೂಣಿಯಲ್ಲಿರುವ ವ್ಯಕ್ತಿ. ಅವರು ರಂಗಭೂಮಿಯನ್ನು ವಾಸ್ತವ ಬದುಕಿನ ಸಮಸ್ಯೆಗಳ ಪರಿಹಾರದ ಕನ್ನಡಿಯಾಗಿ ದೂರದೃಷ್ಟಿ ಅವಲೋಕನ ಮೆಚ್ಚುವಂತದ್ದು, ಮೈಸೂರು ರಮಾನಂದರನ್ನು ಕಲಾವಿದರಾಗಿ ಸಂತೋಷದಿಂದ ಒಪ್ಪಿಕೊಳ್ಳುವ ಜೊತೆಗೆ ನಮ್ಮ ರಾಜ್ಯದ ಮಹಾನಂದ ಎಂದು ಬಾಚಿ ಅಪ್ಪಿಕೊಳ್ಳಬಹುದಾಗಿದೆ.

ಇವರ ಕುರಿತಂತೆ ಕೆಲ ವರ್ಷಗಳ ಹಿಂದೆ ಅಭಿನಂದನಾ ಗ್ರಂಥ ಪ್ರಕಟವಾಗಿದೆ. ಅದರಲ್ಲಿ ನಾನು ಕೂಡ ಬರೆದಿರುವೆ. ಸರ್ಕಾರಿ ಕಚೇರಿಗಳ ಸಹಯೋಗದಲ್ಲಿ ಅವರು ಸರ್ಕಾರದ ಪ್ರಚಾರಾತ್ಮಕ ನೀತಿಗಳನ್ನು ಜನಸಾಮಾನ್ಯರಿಗೆ ತಮ್ಮದೇ ರಚನೆಯ ಬೀದಿ ನಾಟಕಗಳ ಮೂಲಕ ಅತ್ಯಂತ ಪರಿಣಾಮಕಾರಿಯಾಗಿ ತಲುಪಿಸಿದ್ದಾರೆ.
ವೈಯುಕ್ತಿಕವಾಗಿ ಸುಮಾರು 2 ದಶಕಗಳಿಂದ ಅವರು ನನಗೆ ಪರಿಚಿತರು. ಪ್ರೀತಿಯ ಒಡನಾಡಿ. ಮೈಸೂರು ರಮಾನಂದರ ಕಲಾ ಪರಿಚಯವನ್ನು ನಾನು ನಾಡಿನ ಕೆಲವು ಪತ್ರಿಕೆಗಳಲ್ಲಿ ಬರೆದಿರುವುದುಂಟು. ರಮಾನಂದ್ ರಂಗಭೂಮಿಯಲ್ಲಿ ತಾನು ಕಲಾವಿದನಾಗಿ ಬೆಳೆಯುವ ಜೊತೆಗೆ ತನ್ನ ಸಹ ಕಲಾವಿದರನ್ನು ಬೆಳೆಸಿದ್ದಾರೆ. ಕಲಾವಿದರ ಸಂಕಷ್ಟಗಳಿಗೆ ಮಿಡಿದು ಅವರನ್ನು ಸಹ ತನ್ನೊಂದಿಗೆ ಬೆಳೆಸಿದ ಹೃದಯ ಸಂಪನ್ನರು. ಇವರಿಗೆ ರಾಜ್ಯದ ರಾಜ್ಯೋತ್ಸವ ಪ್ರಶಸ್ತಿ ನಿಜಕ್ಕೂ ಸಲ್ಲಬೇಕಿದೆ. ಅದಕ್ಕೆ ಇವರು ನಿಜವಾಗಿಯೂ ಅರ್ಹರಿದ್ದಾರೆ.

ಮೊನ್ನೆ ಅವರು ಬೆಂಗಳೂರಿನ ನಾಗರಬಾವಿಯಲ್ಲಿ ಬಾಡಿಗೆ ಮನೆಯಲ್ಲಿರುವ ಮಗನ ಮನೆಗೆ ಬಂದಿದ್ದರು. ಅವರ ರಂಗ ಸಾಧನೆಯ ಬೃಹತ್ ಫೈಲ್ ನ್ನು ತೋರಿಸಿದರು. ಇದನ್ನು ಆಯ್ಕೆ ಸಮಿತಿ ನೋಡಿ ಪ್ರಶಸ್ತಿಗೆ ಪರಿಗಣಿಸಬೇಕಿದೆ ಅಷ್ಟೇ. ರಂಗಭೂಮಿಯ ಅನುಭವದಿಂದ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ಅಲ್ಲಿಯೂ ಗುರುತರ ಪಾತ್ರಗಳಲ್ಲಿ ಗಮನಾರ್ಹ ಅಭಿನಯದಿಂದ ಮಿಂಚಿದವರು ಮೈಸೂರು ರಮಾನಂದರು. ಎಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೋ ತಿಳಿಯದು. ಇತ್ತೀಚಿಗೆ ಇವರೇ ಪ್ರದಾನ ಪಾತ್ರ ನಿರ್ವಹಿಸುತ್ತಿರುವ ಮಗ್ಗಿ ಪುಸ್ತಕ ಬಿಡುಗಡೆಯ ನಿರೀಕ್ಷಿಯಲ್ಲಿದೆ. ಮತ್ತೊಂದು ರಮಾನಂದರ ವಿಶೇಷವೆಂದರೆ ಇವರ ಮಗ ಮತ್ತು ಪತ್ನಿ ಸಹ ಕಲಾ ಬದುಕಿನಲ್ಲಿ ಇವರ ಜೊತೆಯಲ್ಲಿಯೇ ಸಾಗಿದ್ದಾರೆ. ನಗು ಎಲ್ಲಿದೆಯೋ ಅಲ್ಲಿದೆ ಅರೋಗ್ಯ ಎನ್ನುವ ರಮಾನಂದರ ಸ್ಲೋಗನ್ ನಂತೆ ಇವರು ತಮ್ಮ ಬದುಕಿನ ಉದ್ದಕ್ಕೂ ಕಲಾ ರಸಿಕರನ್ನು ನಗಿಸುತ್ತಲೇ ಬಂದಿದ್ದಾರೆ.

ಗೊರೂರು ಅನಂತರಾಜು, ಹಾಸನ
ವಿಳಾಸ: ಹುಣಸಿನಕೆರೆ ಬಡಾವಣೆ,
29ನೇ ವಾಡ್೯, 3 ನೇ ಕ್ರಾಸ್, ಹಾಸನ – 573201

9449462879.

ಬದುಕು ‘ಹಾವು-ಏಣಿಯಾಟ ಜಯಪ್ಪ ಹೊನ್ನಾಳಿ

ಬದುಕು ಹಾವು ಏಣಿಯಾಟ, ಅದರಲ್ಲಿ ದುರಾಸೆ, ದುಃಖ, ಜಾತಿ, ಮತ, ಕುಲ, ಧರ್ಮಗಳೆಂಬ ವಿಷಕಾರುವ ಹಾವುಗಳು ಜಾಸ್ತಿ, ‘ಬುದ್ಧ-ಬಸವ-ಅಂಬೇಡ್ಕರ್’ ಮುಂತಾದವರಿಲ್ಲಿ ಏಣಿಗಳು, ಆ ಏಣಿಗಳನ್ನು ಹಿಡಿದುಕೊಂಡು ನಾವು ಮೇಲೇರಬೇಕಾಗಿದೆ, ಅದರಲ್ಲೂ ಮುಖ್ಯವಾಗಿ ನಾವು ಅಂದರೆ ಬರೆವಣಿಗೆಯಲ್ಲಿ ತೊಡಗಿಸಿಕೊಂಡವರು, ಬರೆಯದ ಸಾವಿರಾರು ಜನರ ಪ್ರತಿನಿಧಿಗಳಾಗಿ, ಜಾತ್ಯತೀತರಾಗಿ ಜಗತ್ತಿಗೆ ಆದರ್ಶವಾಗಬೇಕಾಗಿದೆ, ತಾತೀತನಾಗದವನು, ಕುಲಾತೀತನಾಗದವನು ಎಂದಿಗೂ ಕವಿಯಾಗಲಾರ, ಮಮತೆ ಸಮತೆಗಳ ತನ್ನೆರಡೂ ಕಣ್ಣಾಗಿಸಿಕೊಂಡವ ಮಾತ್ರ ಕವಿಯಾಗಲು ಸಾಧ್ಯ, ರಾಜಕಾರಣಿಗಳ, ಮಂತ್ರಿ ಮಹೋದಯರ ಶಿಫಾರಸ್ಸಿನಿಂದ ಯಾರೇ ಕವಿಗೋಷ್ಠಿಯ ವೇದಿಕೆಗಳನ್ನೇರಿದರೂ, ಸಹೃದಯರೆದೆಯ ಸಿಂಹಾಸನವನ್ನೇರುವುದು ಅಸಾಧ್ಯ, ಕವಿತೆಯೇ ಕವಿಯನ್ನು ಶಿಫಾರಸ್ಸು ಮಾಡಿದರೆ ಮಾತ್ರ ಸಹೃದಯರೆದೆಯ ಸಿಂಹಾಸನನ್ನು ಪಂಪ-ಕುಮಾರವ್ಯಾಸ-ಕುವೆಂಪು-ಬೇಂದ್ರೆಯವರಂತೆ ಏರಬಹುದು, ಇದನ್ನು ಇಂದಿನ ಬಹುಪಾಲು ಬರೆಹಗಾರರು ಮರೆತಿರುವುದು ಖೇದಕರ ಸಂಗತಿ ಎಂದು ಕವಿ ಡಾ. ಜಯಪ್ಪ ಹೊನ್ನಾಳಿ ಹೇಳಿದರು.

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಮೈಸೂರು ಜಿಲ್ಲಾ ಘಟಕದಿಂದ ಹಾರ್ಡ್ವೀಕ್ ಪ್ರೌಢಶಾಲೆಯಲ್ಲಿ ಏರ್ಪಡಿಸಿದ್ದ ದಸರಾ ಕವಿಗೋಷ್ಠಿ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತಾಡಿದ ಅವರು, ವಿಶ್ವಪ್ರಜ್ಞೆ ಕವಿಗಳದಾಗಬೇಕು, ಅವರು ಶಾಶ್ವತ ಸಾಂಸ್ಕೃತಿಕ ಶಾಸಕರು ತಾವೆಂಬುದನ್ನೆಂದಿಗೂ ಮರೆಯಬಾರದು ಎಂದರು.

ಅಧ್ಯಕ್ಷತೆ ವಹಿಸಿದ್ದ ಕವಯತ್ರಿ ಹೇಮಗಂಗಾ ಮಾತನಾಡಿ, ಭಾಷಾ ಶುದ್ಧಿ ಕವಿಗಳಿಗೆ ಬಹುಮುಖ್ಯ, ಭಾಷೆಯ ಮೇಲೆ ಪ್ರಭುತ್ವವಿಲ್ಲದಿರೆ ಉತ್ತಮ ಸಾಹಿತ್ಯ ಸೃಷ್ಟಿಸಲು ಸಾಧ್ಯವಿಲ್ಲ, ಪ್ರೌಢವಾದ ಭಾಷಾ ಸಂಪನ್ನತೆಯನ್ನು ಕವಿಗಳು ಎಲ್ಲಕ್ಕೂ ಮೊದಲು ತಮ್ಮದಾಗಿಸಿಕೊಳ್ಳಬೇಕು ಎಂದರು.

ವೇದಿಕೆಯ ಮೈಸೂರು ಜಿಲ್ಲಾಧ್ಯಕ್ಷೆ ಶ್ರೀಮತಿ ಇಂದಿರಾ ವಸಂತ್ ಪ್ರಾಸ್ತಾವಿಕ ನುಡಿಗಳನ್ನಾಡಿದರು, ಮೀರಾ ಕೇಸರ್ಕರ್ ಎಲ್ಲರನ್ನೂ ಸ್ವಾಗತಿಸಿದರು, ಸ್ಮಿತಾ ಹೇಮೇಶ್ ಪ್ರಾರ್ಥನೆ ಹಾಗೂ ಕುಮಾರಿ ಪರಿಣಿತ ಹಚ್ಚೇವು ಕನ್ನಡದ ದೀಪ ದೀಪಾರತಿಯ ಅಮೋಘ ನೃತ್ಯ ದೊಂದಿಗೆ ಎಲ್ಲರನ್ನು ರಂಜಿಸಿ ಮೆಚ್ಚುಗೆಗೆ ಪಾತ್ರರಾದರು.

ಮುಖ್ಯ ಅತಿಥಿಗಳಾಗಿ ಎಂ ಶಿವಸ್ವಾಮಿ, ಶೈಲಜಾ ಹಾಸನ, ರಾಜೇಶ್ವರಿ ಹುಲ್ಲೇನಳ್ಳಿ, ರಾಘವೇಂದ್ರ, ಶಿವಕುಮಾರ್, ಬಿಡಿಎಂ ಕುಮಾರ್, ಹಿರಿಯ ಕವಿಗಳಾದ ಎನ್.ಎಲ್. ಚನ್ನೇಗೌಡ, ಗೊರೂರು ಅನಂತ ರಾಜು, ಶೀಲಾ ಭಟ್ ಇದ್ದು ಕವಿತೆ ವಾಚಿಸಿದರು. 20ಕ್ಕೂ ಹೆಚ್ಚು ಕವಿಗಳು ಕವನ ವಾಚಿಸಿದರು. ಪುಷ್ಪಲತಾ ನಾರಾಯಣ್, ಮಂಜುಳ ಜಾದವ್ ನಿರ್ವಹಿಸಿದರು.

ಮನೋಜ್ ಕುಮಾರ್, ಅನಿಲ್ ಕುಮಾರ್ ನಿರೂಪಿಸಿದರು. ವೇದಿಕೆಯ ಸಂಸ್ಥಾಪಕ ಅಧ್ಯಕ್ಷೆ ಕಲಾವತಿ ಮಧುಸೂದನ್ ಪ್ರಾಸಂಗಿಕವಾಗಿ ಮಾತನಾಡುತ್ತ ವೇದಿಕೆಯ ಧ್ಯೇಯೋದ್ದೇಶಗಳನ್ನು ತಿಳಿಸಿ, ವೇದಿಕೆ ಮುನ್ನೆಡೆಸಲು ಸರ್ವರ ಸಹಕಾರ ಕೋರಿದರು ಮತ್ತು ಕಾರ್ಯಕ್ರಮದ ಕಡೆಯಲ್ಲಿ ವಂದನಾರ್ಪಣೆ ಮಾಡಿದರು.

ಕದಂಬ ಸೈನ್ಯ ಸಾಹಿತ್ಯ ಸಂಘಟನೆ ಮತ್ತು ಕದಂಬ ವಾಣಿ ಪತ್ರಿಕೆ ವತಿಯಿಂದ ಮೈಸೂರು ವಿಭಾಗ ಮಟ್ಟದ ಕವಿಗೋಷ್ಕಿ ಶ್ರೀರಂಗಪಟ್ಟಣದಲ್ಲಿ

ಹಾಸನ: ಮಂಡ್ಯ ಜಿಲ್ಲೆ ಪ್ರಸಿದ್ಧ ಕದಂಬ ವಾಣಿ ಪತ್ರಿಕೆ ವತಿಯಿಂದ ಮೈಸೂರು ವಿಭಾಗ ಮಟ್ಟದ ಕವಿಗೋಷ್ಠಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಹಾಸನ ಜಿಲ್ಲೆ ವತಿಯಿಂದ ಎಂಟು ಮಂದಿಗೆ ಕವಿಗೋಷ್ಠಿಗೆ ಅವಕಾಶ ಕಲ್ಪಿಸಲಾಗುವುದು. ಕವಿಗಳು ತಮ್ಮ ವಿವರ, ಹೆಸರು, ದೂರವಾಣಿ ಸಂಖ್ಯೆಯನ್ನು ಕದಂಬ ಸೈನ್ಯ ಕನ್ನಡ ಸಂಘಟನೆ ಹಾಸನ ಜಿಲ್ಲೆ ಗೌರವ ಅಧ್ಯಕ್ಷರು ಗೊರೂರು ‌ಅನಂತರಾಜುರವರಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು ಅಕ್ಟೋಬರ್ ೧೫ನೇ ತಾರೀಖಿನ ಒಳಗೆ ಎಂದು ಮನವಿ ಮಾಡಲಾಗಿದೆ. ಗೊರೂರು ಅನಂತ ರಾಜು ರವರ ದೂರವಾಣಿ ಸಂಖ್ಯೆ ೯೪೪೯೪೬೨೮೭೯.

ಕಾರ್ಯಕ್ರಮವನ್ನು ಶ್ರೀ ಶ್ರೀ ಕ್ಷೇತ್ರ ಚಂದ್ರವನ ಶ್ರೀರಂಗಪಟ್ಟಣ ಪೂರ್ವ ವಾಹಿನಿ ಕಾವೇರಿ ನದಿ ತೀರದಲ್ಲಿ ಹಮ್ಮಿಕೊಳ್ಳಲಾಗಿದೆ. ಒಟ್ಟು ಮಂಡ್ಯ, ಮೈಸೂರು, ಹಾಸನ, ಚಾಮರಾಜನಗರ, ಮಡಿಕೇರಿ ಜಿಲ್ಲೆಗಳ ಕವಿಗಳಿಗೆ ಆಹ್ವಾನ ನೀಡಲಾಗಿದೆ. ಮಧ್ನಾಹ ಊಟದ ವ್ಯವಸ್ಥೆ ಮಾಡಲಾಗಿದೆ, ಸಂಜೆ ಟೀ ವ್ಯವಸ್ಥೆ ಮಾಡಲಾಗಿದೆ.  ಭಾಗವಹಿಸಿದ ಕವಿಗಳಿಗೆ ಪ್ರಶಸ್ತಿ ಪತ್ರ ಮತ್ತು ನೆನಪಿನ ಕಾಣಿಕೆ ನೀಡಲಾಗವುದು. ಪ್ರಥಮ, ದ್ವಿತೀಯ, ತೃತೀಯ, ಇಬ್ಬರಿಗೆ ಸಮಾಧಾನ ಪ್ರಶಸ್ತಿ ನೀಡಿ ವೇದಿಕೆಯಲ್ಲಿ ಸನ್ಮಾನ ಮಾಡಲಾಗುವುದು.

 

ವಾಣಿಜ್ಯ ಸಂಕೀರಣ ಹಾಗೂ ಶ್ರೀ ವಾಸವಿ ಹೋಮ ಸಂಪನ್ನ.

ಗಂಗಾವತಿ: ನಗರದ ಆರ್ಯವೈಶ್ಯ ಸಮಾಜ ಬಾಂಧವರ ಶ್ರೀ ಕನ್ನಿಕಾ ಪರಮೇಶ್ವರಿ ಶರನ್ ನವರಾತ್ರಿ ಪ್ರಯುಕ್ತ ಶ್ರೀ ದುರ್ಗಾಷ್ಟಮಿ ದಿನವಾದ ಮಂಗಳವಾರದಂದು ನೂತನ ವಾಣಿಜ್ಯ ಸಂಕೀರ್ಣದ ಉದ್ಘಾಟನೆ ಹಾಗೂ ಶ್ರೀ ವಾಸವಿ ಹೋಮ ಪೂರ್ಣಾಹುತಿ ಯೊಂದಿಗೆ ಮಂಗಳವಾರದಂದು ಸಂಪನ್ನಗೊಂಡಿತು.

ಬೆಳಿಗ್ಗೆ ಸಮಾಜದ ಅಧ್ಯಕ್ಷ ರೂಪ ರಾಣಿ ಲಕ್ಷ್ಮಣ್ ರಾಯಚೂರು ಅವರು ಪೂರ್ಣ ಕುಂಭದೊಂದಿಗೆ ಸಮಸ್ತ ಆರ್ಯವೈಶ್ಯ ಸಮಾಜ ಹಾಗೂ ಆರ್ಯವೈಶ್ಯ ಸಮಾಜ ಕಾರ್ಯ ಕಾರುಣಿ ಮಂಡಳಿಯ ಸದಸ್ಯರು. ಸಂಕೀರ್ಣದ ಉದ್ಘಾಟನೆಯಲ್ಲಿ ಪಾಲ್ಗೊಂಡಿದ್ದರು.

ಬಳಿಕ ಶ್ರೀ ನಗರೇಶ್ವರ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಬೆಂಗಳೂರಿನ ವೇದಮೂರ್ತಿ ಪಂಡಿತ್ ಸುಬ್ರಹ್ಮಣ್ಯ ಹಾಗೂ ನಾಗರತ್ನ ಅವರು ವಾಸವಿ ಹೋಮದ ನೇತ್ರತ್ವವನ್ನು ವಹಿಸಿ ಅಧ್ಯಕ್ಷ ದಂಪತಿಗಳು ಸೇರಿದಂತೆ ಕಾರ್ಯದರ್ಶಿಗಳಾದ ಈಶ್ವರ ಶೆಟ್ಟಿ ದಂಪತಿಗಳು ಹಾಗೂ ಕಾರ್ಯಕಾರಣಿ ಸಮಿತಿಯ ದಂಪತಿಗಳಿಂದ ಪೂರ್ಣಾಹುತಿ ಜರುಗಿತು.

ಈ ಸಂದರ್ಭದಲ್ಲಿ ಶ್ರೀ ಕುಮಾರಿಕಾ ಪೂಜಾ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಉಪಾಧ್ಯಕ್ಷ ಸುರೇಶ್. ಶೆಟ್ಟಿ. ಭಾಗ್ಯ ಈಶ್ವರ ಶೆಟ್ಟಿ. ಪ್ರಸಾದ ಪಾನ ಗಂಟೆ. ಮಂಜುನಾಥ್, ಮಾರುತಿ ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಸಮಾಜ ಬಾಂಧವರು ಪಾಲ್ಗೊಂಡಿದ್ದರು

ಶ್ರೀ ಶಾರದಾ ಶರನ್‌ ನವರಾತ್ರಿ ಪ್ರಯುಕ್ತ ಅಕ್ಷರಭ್ಯಾಸ.

ಗಂಗಾವತಿ. ನಗರದ ಶಂಕರ ಮಠದ ಶ್ರೀ ಶಾರದಾಂಬ ದೇವಸ್ಥಾನದಲ್ಲಿ ಸೋಮವಾರದಂದು ಅಕ್ಷರಭ್ಯಾಸವನ್ನು ಮಕ್ಕಳಿಗೆ ಆಯೋಜಿಸಲಾಗಿತ್ತು.

ದೇವಸ್ಥಾನದ ಪ್ರಧಾನ ಅರ್ಚಕ ಕುಮಾರ್ ಭಟ್ ಹಾಗೂ ವಿನಾಯಕ್ ಭಟ್ ನೇತೃತ್ವದಲ್ಲಿ ಚಿಕ್ಕ ಮಕ್ಕಳ ಪಾಲಕರಿಗೆ ಮಹಾಸಂಕಲ್ಪ. ಗಣೇಶ ಪೂಜೆ. ಶ್ರೀ ಶಾರದಾ ದೇವಿಯ ಪೂಜೆಯೊಂದಿಗೆ ಪಾಲಕರ ಮಕ್ಕಳೊಂದಿಗೆ ಅಕ್ಷರಭ್ಯಾಸವನ್ನು ಭಕ್ತಿಯಿಂದ ನಡೆಸಲಾಯಿತು.

ಈ ಸಂದರ್ಭದಲ್ಲಿ ಪಾಲಕರ ಪರವಾಗಿ ಕಿನ್ನಾಳ ಗ್ರಾಮದಿಂದ ಆಗಮಿಸಿದ ಅನಿಲ್ ಕುಮಾರ್ ದಂಪತಿಗಳು ಮಾತನಾಡಿ, ಗಂಗಾವತಿಯ ಶೃಂಗೇರಿ ಶಂಕರ ಮಠವು ಶೃಂಗೇರಿ ಶಾರದಾಂಬ ಪದ್ಧತಿಗೆ ಅನುಗುಣವಾಗಿ ದೇವಸ್ಥಾನದ ಅರ್ಚಕರು ಕ್ರಮಬದ್ಧವಾಗಿ ಅಕ್ಷರಭ್ಯಾಸ ನಡೆಸಿದ್ದು ಸಂತಸದಾಯಕವಾಗಿದೆ. ಅಚ್ಚುಕಟ್ಟಾದ ವ್ಯವಸ್ಥೆಯೊಂದಿಗೆ ಯಾವುದೇ ಕೊರತೆ ಆಗದಂತೆ ದೇವಸ್ಥಾನ ಆಡಳಿತ ಮಂಡಳಿಯ ಅಧ್ಯಕ್ಷ ಹಾಗೂ ಸದಸ್ಯರುಗಳು ಅಚ್ಚುಕಟ್ಟಾದ ವ್ಯವಸ್ಥೆಯನ್ನು ಮಾಡಿದ್ದಾರೆ. ಒಟ್ಟಾರೆ ಶ್ರೀ ಶಾರದಾಂಬೆಯ ಅನುಗ್ರಹ ಎಲ್ಲಾ ಮಕ್ಕಳಿಗೆ ಲಭಿಸಲಿ ಎಂದು ಹೇಳಿದರು. ಒಟ್ಟು ಹತ್ತಕ್ಕೂ ಮಕ್ಕಳು ಹಾಗೂ ಪಾಲಕರು ಅಕ್ಷರಭ್ಯಾಸದಲ್ಲಿ ಪಾಲ್ಗೊಂಡಿದ್ದರು.

ರಾಘವೇಂದ್ರ ಜೋಶಿ ಪಾರಾಯಣ ನಡೆಸಿದರು, ಧರ್ಮದರ್ಶಿ ನಾರಾಯಣರಾವ್ ವೈದ್ಯ ವ್ಯವಸ್ಥಾಪಕ Chart ಅಳವಂಡಿ. ಶ್ರೀನಿವಾಸ್ ಕರಮುಡಿ. ಶಿಕ್ಷಕಿ ಕವಿತಾ ದಿಗ್ಗಾವಿ ಉಪಸ್ಥಿತರಿದ್ದರು.

ಗಂಗಾವತಿಯಲ್ಲಿ ಪ್ರವಾಸೋಧ್ಯಮ ದಿನಾಚರಣಗೆ ಮೆರಗು ತಂದುಕೊಟ್ಟ ದಂತವೈದ್ಯ ಡಾ|| ಶಿವಕುಮಾರ ಮಾಲಿಪಾಟೀಲ್‌

ಈ ಸಲದ ವಿಶ್ವ ಪ್ರವಾಸೋದ್ಯಮ ದಿನವನ್ನು ವಿಶೇಷವಾಗಿ ಆಚರಣೆ ಮಾಡೋಣವೆಂದು ಯೋಚಿಸುತ್ತಾ ಬಸ್ ಸ್ಟಾಂಡ್ ಒಳಗೆ ಹೋದಾಗ ಕಣ್ಣಿಗೆ ಬಿದ್ದಿದ್ದು .ಮಹಿಳಾ ವಿಶ್ರಾಂತಿ ಕೊಠಡಿ, ಅದರ ಗೋಡೆಯ ಮೇಲೆ ಬಹಳಷ್ಟು ಅದು ಇದು ಗೀಚಾಡಿ, ಅಂದಗೆಡಿಸಿದ್ದರು. ಇದರ ಒಳಗಡೆ ವಿವರಣೆ ಒಳಗೊಂಡ ಸ್ಮಾರಕಗಳ ಪೊಟೊ ಹಾಕಲು ಯೋಚನೆ ಬಂತು, ಹಾಗೆ ಹಚ್ಚಿದರೆ ಸುಂದರವಾಗಿರಲ್ಲ, ಬಣ್ಣ ಹೊಡೆದು Posters ಹಚ್ವೊಣ ಎಂದುಕೊಂಡು ಹೊರಬಂದೆ, ನನ್ನ ಗೆಳೆಯ ಹಿರಿಯ ಅಧಿಕಾರಿ ಅಶ್ರಫ್ ಅಲಿ ಗೆ ಪೊನ್ ಮಾಡಿ ವಿಷಯ ತಿಳಿಸಿದೆ, ಅವನು ಡಿಪೋ ಮ್ಯಾನೆಜರ್ ಜೊತೆಗೆ ಮಾತಾಡುತ್ತೆನೆ ಎಂದನು.ನಂತರ ಪ್ರಹ್ಲಾದ್ ಕುಲಕರ್ಣಿ ಅವರನ್ನು ಕರೆದುಕೊಂಡು ಬಸ್ ಡಿಪೋಗೆ ಹೋಗಿ ಘಟಕ ವ್ಯವಸ್ಥಾಪಕ ರಾಜಶೇಖರ ಅವರನ್ನು ಭೇಟಿಯಾದೆ, ಆಗ ಅವರು ಉತ್ತಮವಾಗಿ ಸ್ಪಂದಿಸಿದರು, ರಾತ್ರಿ 8.30 ಕ್ಕೆ ರಾಜಶೇಖರ ಅಣ್ಣಿಗೇರಿ ಹಾಗೂ ನಾನು ಬಸ್ ನಿಲ್ದಾಣ ವೀಕ್ಷಣೆ ಹೋದೆವು. ಮಹಿಳಾ ಕೊಠಡಿಯನ್ನು ನೋಡಿದ ತಕ್ಷಣ, ತಮ್ಮ ಸಿಬ್ಬಂದಿ ವರ್ಗಕ್ಕೆ ಚಾರಣ ಬಳಗದಿಂದ ಇಲ್ಲಿ ಬಣ್ಣ ಹೊಡದು, ಪ್ರವಾಸಿ ತಾಣಗಳ ಪೋಸ್ಟರ್ ಹಚ್ಚುತ್ತಾರೆ, ಇವರಿಗೆ ಸಹಕಾರ ನೀಡಲು ಆದೇಶ ನೀಡಿದರು. ಆಗ ನೂತನ್ ದರೋಜಿ ಅವರಿಗೆ ಪೊನ್ ಮಾಡಿ,‌ ನಾನು ಆನೆಗೊಂದಿ ಪ್ರವಾಸೋದ್ಯಮ ಕಾರ್ಯಕ್ರಮಕ್ಕೆ ಹೋಗುತ್ತೆನೆ, ಬಸ್ ನಿಲ್ದಾಣದ ಮಹಿಳಾ ಕೊಠಡಿ ಒಳಗೆ, ಹೊರಗಡೆ ಬಣ್ಣ ಹಚ್ಚಲು ಕೇಳಿಕೊಂಡೆ. ನೂತನ್‌ ದರೋಜಿ ,ಮರುದಿನ ಪೆಂಟರ್ ಕಳಿಸಿ ಬಣ್ಣ ಹಚ್ಚಿಸಿದ, ಡಾ.ಶರಣಬಸಪ್ಪ ಕೋಲ್ಕಾರ್ ಸರ್ ಪ್ರವಾಸೋದ್ಯಮ ಇಲಾಖೆಗೆ ಕಳುಹಿಸಿದ ಪೋಸ್ಟರ್ ಗಳನ್ನು ಇಲ್ಲಿ ಹಚ್ಚಲು ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರಾದ ನಾಗರಾಜ ಅವರಿಂದ ಪರವಾನಿಗೆ ಪಡೆದೆ.

ಕೋಲ್ಕಾರ್ ಸರ್ ತಯಾರಿಸಿದ ಪೋಸ್ಟರ್ ನಲ್ಲಿ ಒಂದು ಕಡೆ ಕನ್ನಡ,ಇನ್ನೊಂದು ಕಡೆ ಇಂಗ್ಲೀಷ್ ಭಾಷೆಯಲ್ಲಿ ಇದ್ದವು. ಬರಿ ಕನ್ನಡ ಅಷ್ಟೇ ತೆಗೆದುಕೊಂಡು, ಬೇರೆ ಬೇರೆ ಆಕಾರದ ಪೋಸ್ಟರ್‌ಗಳು ಆಕರ್ಷಣೀಯವಾಗಿ ಕಾಣಲು, ಪೋಟೊಗಳನ್ನು ಪ್ರವಾಸೋದ್ಯಮ ಇಲಾಖೆಯ ಯಮನೂರ್ ಅವರಿಂದ, ಪ್ರಹ್ಲಾದ್ ಕುಲಕರ್ಣಿ ಅವರಿಂದ, ಕೆಲವೊಂದು ಗೂಗಲ್ ನಿಂದ ಉತ್ತಮ ಪೊಟೊಗಳನ್ನು ಆಯ್ಕೆ ಮಾಡಿ, ಪೋಸ್ಟರ್ ತಯಾರಿಸಲು ಮಂಜುನಾಥ ಸೋನಾರ್, ವಿಶ್ವರೂಪ ಕಂಪ್ಯೂಟರ್ಸ್ ನಲ್ಲಿ ಎರಡು ತಾಸುಗಳ ಕಾಲ ಕುಳಿತು ತಯಾರಿಸಿದೆವು. ಒಂದೇ ದಿನದಲ್ಲಿ ಗೋಡೆಗೆ ಬಣ್ , ಪೋಸ್ಟರ್ ರೆಡಿಯಾದವು , ರಾತ್ರಿ ಮೇದಾರ್ ಮಂಜುನಾಥ ಅವರನ್ನು ಕರೆದುಕೊಂಡು, ನಾನು, ಪ್ರಹ್ಲಾದ್ ಕುಲಕರ್ಣಿ, ಮೈಲಾರಪ್ಪ ಬೂದಿಹಾಳ ಮಳೆಯಲ್ಲೇ ಬಸ್ ಸ್ಟಾಂಡ್ ಗೆ ತೆರಳಿ, ಬೆಳಿಗ್ಗೆ ಉದ್ಘಾಟನಾ ಇದೆ, ನಾವು ರಾತ್ರಿ ಎಷ್ಟೊತ್ತಾದರೂ ಪೋಸ್ಟರ್ ಗಳನ್ನು ಹಚ್ಚಲೇಬೇಕಾಗಿತ್ತು. ರಾತ್ರಿ 11.30 ವರೆಗೆ ಪೋಸ್ಟರ್ ಹೆಚ್ಚುವ ಕೆಲಸ ಆಯಿತು. ಮರುದಿನವೇ ಉದ್ಘಾಟನೆ ಒಂದು ಗಂಟೆಯ ಮೊದಲು ಆಮಂತ್ರಣ ಪತ್ರಿಕೆಯನ್ನೂ ಮಂಜುನಾಥ ಸೋನಾರ್‌ ಅವರಿಂದ ತಯಾರಿಸಿ, ಅತಿಥಿಗಳಿಗೆ ಕಳಿಸಿದೆ,ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ನಾಗರಾಜ, ಡಾ. ಶರಣಬಸಪ್ಪ ಕೋಲ್ಕಾರ್‌. ಸಾರಿಗೆ ಘಟಕ ವ್ಯವಸ್ಥಾಪಕರಾದ ರಾಜಶೇಖರ ಅಣ್ಣಿಗೇರಿ ಅವರ ಸಹಕಾರದಿಂದ ಉತ್ತಮ ಕಾರ್ಯಕ್ರಮ ನೆರವೇರಿತು.

ಮಾದ್ಯಮ ಮಿತ್ರರು, ಪತ್ರಕರ್ತರು ಸರಿಯಾದ ಸಮಯಕ್ಕೆ ಬಂದು ನಮ್ಮ ಕೆಲಸಕ್ಕೆ ಪ್ರೋತ್ಸಾಹ ನೀಡಿದರು. ಗಂಗಾವತಿ ಚಾರಣ ಬಳಗದ ಸದಸ್ಯರು ಹಾಗೂ ಹಿತೈಷಿಗಳು ಆಗಮಿಸಿ ಕಾರ್ಯಕ್ರಮ ನಾನು ಅಂದುಕೊಂಡಕ್ಕಿಂತ ಹೆಚ್ಚಿನ ರೀತಿಯಲ್ಲಿ ಯಶಸ್ಸು ಕಂಡಿತು.ನಂತರ ತಹಶಿಲ್ದಾರರ ಕಚೇರಿಗೆ ಹೋಗಿ ಅಲ್ಲಿ ತಹಶಿಲ್ದಾರ ಯು.ನಾಗರಾಜ ಹಾಗೂ ಉಪತಹಶಿಲ್ದಾರ ಪ್ರಕಾಶ ಅವರ ಸಮ್ಮುಖದಲ್ಲಿ ಪೋಸ್ಟರ್ ಗಳನ್ನು ಹಚ್ಚಿದೆವು. ನಮ್ಮ ಜಿಲ್ಲೆಯ ಪ್ರವಾಸಿ ತಾಣಗಳ ಬಗ್ಗೆ ಜನರಿಗೆ ಮಾಹಿತಿ ಸಿಗಬೇಕು ಎಂಬ ಧ್ಯೇಯದೊಂದಿಗೆ ನಡೆದ ಕಾರ್ಯ ಸಾರ್ಥಕತೆ ಕಂಡಿತು. ಈ ಆಂದೋಲನವನ್ನು ಮುಂದುವರಿಸಲು ಆತ್ಮ ವಿಶ್ವಾಸ ಹೆಚ್ಚಿಸಿತು. ಈ ಕಾರ್ಯದಲ್ಲಿ ಕೈ ಜೋಡಿಸಿದ ಎಲ್ಲರಿಗೂ ಅನಂತ ಧನ್ಯವಾದಗಳ.

ಮಂಜುನಾಥ ಸೋನಾರ್‌

ವಿಶ್ವರೂಪ ಕಂಪ್ಯೂಟರ್ಸ್‌ ಗಂಗಾವತಿ

ಮೊ: 9964415556, 9886382270

ನಮ್ಮ ಊರು ಹಾಸನ ಶಿಲ್ಪಕಲೆಯ ಶಾಸನ ಗಾಯಕ ಆರ್. ರಾಮಶಂಕರಬಾಬು

ಮಾತನಾಡುವಾಗ ಉಗ್ಗುವಿಕೆಯ ತೊಂದರೆಯಿಂದ ತೊದಲುವ ವ್ಯಕ್ತಿ ಹಾಡುವಾಗ ಸುಲಲಿತವಾಗಿ ಹಾಡುತ್ತಾರೆ ಎಂದರೆ ಈ ಸಾಧನೆಯ ಹಿಂದೆ ದೃಢ ಸಂಕಲ್ಪ ಮೇಳೈಸಿದೆ ಎನ್ನಬಹುದು. ತನ್ನ ಉಗ್ಗುವಿಕೆಯ ತೊಂದರೆಗೆ ಹಾಡುಗಾರಿಕೆಯಿಂದ ಪರಿಹಾರ ಕಂಡುಕೊಂಡ ಹಾಸನದ ಆರ್. ರಾಮಶಂಕರಬಾಬು ಜಿಲ್ಲೆಯ ಪ್ರತಿಭಾನ್ವಿತ ಗಾಯಕರು. ಉಗ್ಗು ಇದ್ದರೂ ಹಾಡಿ ಹಿಗ್ಗುವ ಮುಖೇನ ತಮ್ಮ ಬಾಳಿನ ನೋವು ಮರೆಯುತ್ತಿದ್ದರು. ಚಿಕ್ಕ ವಯಸ್ಸಿನಲ್ಲಿ ಉಗ್ಗುವಿಕೆ ತೊಂದರೆಯಿಂದ ಮಾತನಾಡಲು ಕಷ್ಟಪಡುತ್ತಿದ್ದ ಬಾಬು ಛಲ ಮತ್ತು ದೃಢಚಿತ್ತದಿಂದ ಹಾಡುವುದನ್ನು ಅಭ್ಯಾಸ ಮಾಡಿಕೊಂಡವರಾಗಿದ್ದರು. ಜಾನಪದ ಹಾಡುಗಳನ್ನು ಹಾಡುವುದರ ಜೊತೆಗೆ ಕಂಜರ ಬಾರಿಸುವುದನ್ನು ರೂಢಿಸಿಕೊಂಡಿದ್ದರು. ಹೆಚ್ಚು ಹೆಚ್ಚು ಆತ್ಮವಿಶ್ವಾಸದಿಂದ ಹಾಡುಗಾರಿಕೆ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಗೆದ್ದವರು. ಗಾನ ಸೌರಭ, ಸಂಗೀತ ಗಂಗಾ ಎಂಬ ಹೆಸರಿನಲ್ಲಿ ಆರ್ಕೆಸ್ಟ್ರಾ ತಂಡ ಕಟ್ಟಿಕೊಂಡು ಗಣೇಶೋತ್ಸವ, ರಾಜ್ಯೋತ್ಸವ, ಮದುವೆ ಸಮಾರಂಭಗಳಲ್ಲಿ ಹಾಡುತ್ತಿದ್ದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಾಯೋಜನೆಯಲ್ಲಿ ಸುಗಮ ಸಂಗೀತ ಕಾರ್ಯಕ್ರಮ ನೀಡಿದ್ದರು. ಹಾಸನ ಆಕಾಶವಾಣಿಯಲ್ಲಿ ತತ್ವಪದ ಗಾಯಕರಾಗಿ ಹಾಡಿದ್ದರು. ಸಾಮಾಜಿಕ ಜನಜಾಗೃತಿಯ ಕಾರ್ಯಕ್ರಮಗಳಲ್ಲಿ ಅವಕಾಶ ಸಿಕ್ಕಾಗ ತಮ್ಮೆಲ್ಲಾ ಕಾರ್ಯಗಳನ್ನು ಬದಿಗೊತ್ತಿ ಭಾಗವಹಿಸುತ್ತಿದ್ದರು. ಸರ್ಕಾರಿ ಪ್ರಾಯೋಜಿತ ಜನಜಾಗೃತಿ ಕಾರ್ಯಕ್ರಮ ಅದು ಆರೋಗ್ಯ ನೈರ್ಮಲ್ಯ ವಿಚಾರವಿರಲಿ, ಕುಡಿತದ ವ್ಯಸನ, ರಸ್ತೆ ಸುರಕ್ಷತೆ ಕೌಟುಂಬಿಕ ಸಾಮರಸ್ಯ ಹೀಗೆ ಎಂತಹದೇ ವಿಷಯದ ವಿಚಾರ ಇರಲಿ ಅದಕ್ಕೆ ಸ್ಥಳದಲ್ಲೇ ರಾಗ ತಾಳ ಮೇಳೈಸಿ ಹಾಡುವ ಸಾಮರ್ಥ್ಯ ಅವರಲ್ಲಿತ್ತು.

ಅಂದಿನ ದಿನಗಳಲ್ಲಿ ನಾನು ಗೊರೂರಿನಲ್ಲಿ ಕಟ್ಟಿ ಬೆಳೆಸಿದ್ದ ಕನ್ನಡ ಕಲಾ ಸಾಹಿತ್ಯ ವೇದಿಕೆ ವೃಂದ ಜಿಲ್ಲೆಯ ನಾಟಕ ಸ್ಫರ್ಧೆಗಳಲ್ಲಿ ಹಾಸನ ಜಾತ್ರೆ, ಹೊಳೆನರಸೀಪುರ ಸಕಲೇಶಪುರ ಜಾತ್ರೆ, ಗಣೇಶೋತ್ಸವಗಳಲ್ಲಿ ನಮ್ಮ ನಾಟಕ ತಂಡದ ಹಿನ್ನೆಲೆ ಗಾಯಕರಾಗಿ ಬರುತ್ತಿದ್ದರು, ಹಾಡುತ್ತಿದ್ದರು. ನಾಟಕಕ್ಕೆ ಜನ ಸೇರಿಸಲು ಮೊದಲಿಗೆ ಬಾಬು ಅವರಿಗೆ ಹಾಡಲು ಅವಕಾಶ ನೀಡುತ್ತಿದ್ದೆ. ಅವರು ನನ್ನ ಊರು ಹಾಸನ ಶಿಲ್ಪಕಲೆಯ ಶಾಸನ ತಾವೇ ರಚಿಸಿದ್ದ ಈ ಹಾಡನ್ನು ಸಾವಿರಾರು ವೇದಿಕೆಗಳಲ್ಲಿ ಹಾಡಿದ್ದಾರೆ. ಈ ಗೀತೆ ನಮ್ಮ ನಾಟಕಕ್ಕೂ ಮೊದಲು ನಾವು ಮೇಕಪ್ ಮಾಡಿಕೊಳ್ಳಲು ಸಮಯ ಸಿಗಲು ಅನುಕೂಲವಾಗುತ್ತಿತ್ತು ಮತ್ತು ನಾಟಕ ಆರಂಭಗೊಂಡಿರಬೇಕು ಎಂದು ಭಾವಿಸಿ ಜನ ಧಾವಿಸಿ ಬರುತ್ತಿದ್ದರು.

ಇನ್ನು ನಮ್ಮ ಹುಡುಗರು ಬಸ್ಸಿನಿಂದ ಇಳಿದ ಕೂಡಲೇ ಅಲ್ಲಿ ಇಲ್ಲಿ ಚೆಲ್ಲಾಪಿಲ್ಲಿಯಾಗಿ ಜಾತ್ರೆ ಮಾಳ ಸುತ್ತುವ ಕೆಟ್ಟ ಚಾಳಿ ಬೆಳೆಸಿಕೊಂಡಿದ್ದರು. ಆಗ ಬಾಬು ಅವರ ಕಂಚಿನ ಕಂಠದಿoದ ಬಾಬು ಮೈಕಿನಲ್ಲಿ ಹಾಡುತ್ತಿದ್ದನ್ನು ಕೇಳಿಸಿಕೊಂಡು ಆಗ ಕಲಾವಿದರು ನಿಧಾನವಾಗಿ ಬಂದು ಸಾರಿ ಸಾರ್,. ಎಂದು ಪರದೆ ಹಿಂದೆ ಸರಿಯುತ್ತಿದ್ದರು. ಈ ಅನುಭವ ಹಿನ್ನಲೆಯಲ್ಲೇ ನಾನು ತೋಳ ಬಂತು ತೋಳ ಬರೆದು ನಾಟಕವಾಡಿಸಿ ಅದೀಗ ಪುಸ್ತಕವಾಗಿ ಓದುಗರ ಕ್ಕೆ ಸೇರಿದೆ. ಇಂದು ಕಾಮಿಡಿ ಕಿಲಾಡಿಗಳು ವಿನ್ನರ್ ಆಗಿರುವ ಕೆ.ಆರ್.ಪೇಟೆ ಶಿವರಾಜ್ ಅಂದು ನಮ್ಮ ತಂಡದ ನಟನಾಗಿ ರಂಗದ ಮೇಲೆ ಬಂದಾಗ ಆಗಿನ್ನು ಕಾಲೇಜು ವಿದ್ಯಾರ್ಥಿ. ಬಾಬು ಅವರು ನನ್ನ ಕವನಗಳಿಗೆ ರಾಗ ಕಟ್ಟಿ ವೇದಿಕೆಗಳಲ್ಲಿ ಹಾಡಿದ್ದಾರೆ. ಇವರು ವೇದಿಕೆಯಲ್ಲಿ ಏಕಪಾತ್ರಾಭಿನಯವನ್ನು ಮಾಡಿ ಜನರನ್ನು ರಂಜಿಸಿದ್ದಾರೆ. ಅನೇಕ ನಾಟಕಗಳಿಗೆ ಹಿನ್ನೆಲೆ ಗಾಯಕರಾಗಿ ಹಾಡಿರುವ ಇವರಿಗೆ ಕುಂಟುನಾಯಿ, ವ್ಯವಸ್ಥೆ, ಆತ್ಮ ಯಾವ ಕುಲ ಜೀವ ಕುಲ ನಾಟಕಗಳು ಹೆಸರು ತಂದಿದ್ದವು.

ವಾರ್ತಾ ಇಲಾಖೆ ಆರೋಗ್ಯ ಇಲಾಖೆಗಳು ಹಮ್ಮಿಕೊಂಡ ಜನಜಾಗೃತಿ ಕಾರ್ಯಕ್ರಮಗಳಲ್ಲಿ ಸಾಕ್ಷರತಾ ಆಂದೋಲನದ ಕಲಾಜಾಥದಲ್ಲಿ ಪಾಲ್ಗೊಂಡು ಬಾಬು ದಮಡಿ ಬಾರಿಸಿಕೊಂಡು ಹಾಡಿದ್ದಾರೆ. ಇವರ ಕಲಾ ಪ್ರತಿಭೆ ಗುರುತಿಸಿ ಜಿಲ್ಲೆಯ ಸಂಘ ಸಂಸ್ಥೆಗಳು ಸನ್ಮಾನಿಸಿ ಗೌರವಿಸಿವೆ. ಆದರೆ ಇಂತಹ ಮಹಾನ್ ಕಲಾವಿದನಿಗೆ ಹಾಸನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಕಡೆಗೂ ಸಿಗದೇ ಇದ್ದಿದ್ದು ವಿಷಾದನೀಯ. ಈ ಬಗ್ಗೆ ಅಷ್ಟಾಗಿ ಆಸಕ್ತಿ ತೋರದ ಬಾಬು ಮುಂದಿನ ವರ್ಷ ನೋಡೋಣ ಬಿಡಿ ಅನಂತರಾಜು ಎಂದು ನಿರಾಸೆಯಿಂದಲೇ ಹೇಳುತ್ತಿದ್ದರು. ಎರಡು ವರ್ಷದ ಹಿಂದೆ ಅರ್ಜಿ ಹಾಕಿದ್ದರು. ಪ್ರಶಸ್ತಿ ಸಿಗದೆ ನಿರಾಶರಾಗಿದ್ದರು. ಕಲಾವಿದರ ಮಾಶಸನಕ್ಕೂ ಅರ್ಜಿ ಹಾಕಲಾಗಲಿಲ್ಲ. ಜನ್ಮ ದಿನಾಂಕ ಪ್ರಮಾಣ ಪತ್ರ (ಡೇಟ್ ಆಫ್ ಬರ್ತ್ ಫಿಕೇಟ್ ) ಬೇಕಾಗಿತ್ತು ಎ೦ದು ಕಾಣುತ್ತದೆ. ಅದು ಅವರಲ್ಲಿ ಇರಲಿಲ್ಲವೇನೋ. ಅದಕ್ಕಾಗಿ ಅವರು ಅನಂತರಾಜು, ನೀವು ನನ್ನ ಪರಿಚಯ ಲೇಖನ ಪ್ರಜಾವಾಣಿ ದಿನಪತ್ರಿಕೆಯಲ್ಲಿ ಬರೆದಿದ್ದಿರಲ್ಲಾ ಅದರ ಕಟಿಂಗ್ಸ್ ನಿಮ್ಮ ಫೈಲ್ ನಲ್ಲಿ ಇದ್ದರೆ ಹುಡುಕಿಕೊಡಿ ಎಂದರು. ನಾನು ಸಾಮಾನ್ಯವಾಗಿ ಕಲಾವಿದರ ಪರಿಚಯ ಲೇಖನ ಬರೆಯುವಾಗ ಅವರ ಜನ್ಮ ದಿನಾಂಕ ಕೇಳಿ ದಾಖಲಿಸುತ್ತಿದ್ದೆ. ಕೆಲವರಿಗೆ ಅವರ ಹುಟ್ಟಿದ ದಿನಾಂಕವೇ ಗೊತ್ತಿರುವುದಿಲ್ಲ. ಈಗಿನಂತೆ ಶಾಲೆಗೆ ಮಕ್ಕಳನ್ನು ಸೇರಿಸುವಾಗ ಆಸ್ಪತ್ರೆ, ನಗರಸಭೆಯಿಂದ ಪಡೆದ ಜನನ ಪ್ರಮಾಣ ಕೂಡಲೇಬೇಕೆಂಬ ಕಡ್ಡಾಯವಿರಲಿಲ್ಲ. ಇದಕ್ಕೆ ಉದಾಹರಣೆ ಹೇಳಬೇಕೆಂದರೆ ಸಾಹಿತಿಗಳು ನಮ್ಮ ಚಿಕ್ಕಪ್ಪನವರು ಆದ ಗೊರೂರು ಸೋಮಶೇಖರ್ ತಮ್ಮ ಆತ್ಮಕಥೆ ಪುಸ್ತಕ ಗೊರೂರು ನೆನಪುಗಳಲ್ಲಿ ಬರೆದಿದ್ದಾರೆ.

ಮಹಾಲಯ ಅಮಾವಾಸೆಯ ದಿನ ಹಬ್ಬ ಮುಗಿಸಿ ನಾನು ನನ್ನ ಸಹೋದರ ಲೇಖಕ ನಿವೃತ್ತ ಉಪನ್ಯಾಸಕ ಗೊರೂರು ಶಿವೇಶ್ ಸಂಜೆ ಎಲೆ ಅಡಿಕೆ ತಿನ್ನುತ್ತಾ ಸಾಹಿತ್ಯ ಪರಿಷತ್ತು ಚುನಾವಣೆ, ನಾಟಕ ವಿಚಾರವಾಗಿ ಮಾತನಾಡುತ್ತಾ ಬಾಬು ವಿಷಯ ಮಧ್ಯೆ ಬಂತು. ಆಗಲೇ ನಾನು ಬಾಬು ಅವರಿಗೆ ಈ ಬಾರಿ ಅರ್ಜಿ ಹಾಕಿ ಬಾಬು ಎಂದು ಮೆಸೇಜ್ ಮಾಡಿದ್ದೆ. ಮಾರನೇ ದಿನ ಬೆಳಿಗ್ಗೆ ಕಾದಂಬರಿಗಾರ್ತಿ ಶ್ರೀಮತಿ ಶೈಲಜಾ ಸುರೇಶ್ ಮೇಡಂ ಬಾಬು ನಿಧನ ಸುದ್ಧಿ ವ್ಯಾಟ್ಸಪ್ ಮಾಡಿದ್ದರು. ಇದು ಆ ಕ್ಷಣಕ್ಕೆ ನನಗೆ ಶಾಕಿಂಗ್ ನ್ಯೂಸ್. ಆಗ ನಮ್ಮ ವಾರ್ಡಿನ ಕಸದ ಗಾಡಿ ನಮ್ಮ ಮನೆ ಕಡೆ ಬರುತ್ತಿರಲು ಆ ಗಾಡಿಯ ಮೈಕಿನಿಂದ ಬಾಬು ಅವರ ಜನಪ್ರಿಯ ಹಾಡು ನನ್ನ ಊರು ಹಾಸನ ಶಿಲ್ಪ ಕಲೆಯ ಶಾಸನ ಕೇಳಿ ಬರುತ್ತಿತ್ತು. ಈ ಹಾಡು ಮಲಗಿದ್ದ ನಮ್ಮನ್ನು ಹಿಂದೆಲ್ಲಾ ಬಡಿದೆಬ್ಬಿಸುತ್ತಿತ್ತು. ಬಾಬು ಈ ಆಡಿಯೋ ಎಲ್ಲಿ ಮಾಡಿಸಿದ್ದೀರಿ ಎಂದು ಹಿಂದೊಮ್ಮೆ ಕೇಳಿದ್ದೆ. ಅನಂತರಾಜು, ನಿಜವಾಗಿಯೂ ಈ ಹಾಡು ನಾನು ಹಾಡಿದ್ದಲ್ಲ ಗಾಯಕ ಭಾನುಮೋಶ್ರೀಯವರು ಹಾಡಿದ್ದು ಎಂದಿದ್ದರು. ಬಾಬು ಅವರದೇ ಸ್ವರ ಸಾಮಾರ್ಥ್ಯದಲ್ಲಿ ಈ ಹಾಡನ್ನು ಮ್ಯೂಸಿಕ್ ಸಂಗಾತ್ಯದಲ್ಲಿ ರೆಕಾರ್ಡ್ ಮಾಡಿ ಭಾನುಮೋಶ್ರಿ ಯೂ ಟ್ಯೂಬ್ ನಲ್ಲಿ ಹಾಕಿದ್ದರು ಎಂದು ಕಾಣುತ್ತದೆ.ಅದನ್ನು ಗೊರೂರು ಶಿವೇಶ್ ಯೂ ಟ್ಯೂಬ್‌ನಿಂದ ತೆಗೆದು ಗ್ರೂಪ್ ಗೆ ಕಳಿಸಿದರು. ಹಾಡು ಕೇಳುತ್ತಾ ಹಾಗೆಯೇ ಕಣ್ಣಂಚಿನಲ್ಲಿ ನೀರು ಧುಮುಕದೆ ಹಾಗೆ ನಿಂತಿತ್ತು.

ಗೊರೂರು ಅನಂತರಾಜು, ಹಾಸನ.
ಮೊ:೯೪೪೯೪೬೨೮೭೯.
ವಿಳಾಸ: ಹುಣಸಿನಕೆರೆ ಬಡಾವಣೆ,
೨೯ನೇ ವಾರ್ಡ್, ಶ್ರೀ ಶನೀಶ್ವರ ದೇವಸ್ಥಾನ ರಸ್ತೆ, ಹಾಸನ.

ಶ್ರೀ ಶಾರದಾ ಶರನ್‌ ನವರಾತ್ರಿ ಮಹೋತ್ಸವ.. ಸಂಕಲ್ಪದಂತೆ ಹರಕೆ ಸಮರ್ಪಿಸಿದ ಮಹಿಳೆ.

ಗಂಗಾವತಿ: ನಗರದ ಶಂಕರ ಮಠದಲ್ಲಿ ಶ್ರೀ ಶಾರದಾದೇವಿ 8ನೆಯ ವರ್ಷದ ಶರನ್ ನವರಾತ್ರಿ ಪ್ರಯುಕ್ತ ಹಾಗೂ ಶೃಂಗೇರಿ ಜಗದ್ಗುರು ಶ್ರೀ ಭಾರತಿ ತೀರ್ಥ ಮಹಾಸ್ವಾಮಿಗಳ ವಜ್ರೋತ್ಸವದ ಭಾರತಿ ಸಮಾರಂಭದ ಅಡಿಯಲ್ಲಿ ಶುಕ್ರವಾರದಂದು ಸಮಾಜಮುಖಿ ಕಾರ್ಯಕ್ರಮದ ಅಡಿಯಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರನ್ನು ಗುರುತಿಸಿ ಸನ್ಮಾನಿಸಲಾಯಿತು. ಜೊತೆಗೆ ವಿಶೇಷವಾಗಿ ನಗರದ ಮಹಿಳೆ ಒಬ್ಬಳು ಕಳೆದ ವರ್ಷ ತನ್ನ ಮಗಳ ಮದುವೆಗಾಗಿ ಹರಕೆ ಹೊತ್ತು ಹುಲಿಗೆಮ್ಮ ಎಂಬ ಮಗಳನ್ನು ಮದುವೆ ಮಾಡಿದ ಪ್ರಯುಕ್ತ ತಾಯಿ ಮತ್ತು ಮಗಳು 400 ಅಧಿಕ ಮಹಿಳೆಯರಿಗೆ ಅರಿಶಿಣ ಕುಂಕುಮ ಜೊತೆಗೆ ಹೂವು ಹಸಿರು ಬಳೆಗಳನ್ನು ಸಮರ್ಪಿಸಿದ್ದು ಅವರಲ್ಲಿನ ಶ್ರೀ ಶಾರದಾಂಬೆಯ ಬಗ್ಗೆ ಇರುವ ನಂಬಿಕೆ ಅನುಗ್ರಹ ಭಕ್ತಾದಿಗಳಿಗೆ ಸಾಕ್ಷಿ ಯಾಗಿ ಕಂಡುಬಂದಿತು

ಇದೇ ಸಂದರ್ಭದಲ್ಲಿ ಆಚಾರ ನರಸಾಪುರ ಗ್ರಾಮದ ನಾಟಿ ವೈದ್ಯ ಮಲ್ಲೇಶಪ್ಪ ಹಾಗೂ ಕುಟುಂಬಸ್ಥರ ನಿಸ್ವಾರ್ಥ ಸೇವೆಯನ್ನು ಪರಿಗಣಿಸಿ ಧರ್ಮದರ್ಶಿ ನಾರಾಯಣರಾವ್ ವೈದ್ಯ ಸನ್ಮಾನಿಸಿ ಆಶೀರ್ವದಿಸಿದರು. ಸನ್ಮಾನ ಸ್ವೀಕರಿಸಿದ ಡಾ|| ಪ್ರವೀಣ್ ಮಾತನಾಡಿ, ಧರ್ಮದರ್ಶಿ ನಾರಾಯಣರಾವ್ ವೈದ್ಯ ಅವರ ವ್ಯಕ್ತಿತ್ವ ಅಪಾರವಾಗಿದ್ದು. ಅವರು ಬ್ಯಾಂಕಿನಲ್ಲಿನ ಸೇವೆ ಗ್ರಾಹಕರು ಅವರ ಮೇಲೆ ಇಟ್ಟ ಪ್ರೀತಿ ವಿಶ್ವಾಸ ಸ್ಮರಿಸಿ ಪ್ರಸ್ತುತ ಈಗ ಶ್ರೀ ಶಾರದಾ ಪೀಠದ ಧರ್ಮದರ್ಶಿಗಳಾಗಿ ಸಮಾಜದ ಎಲ್ಲಾ ವರ್ಗದ ಜನರನ್ನು ಆಹ್ವಾನಿಸಿ ಧಾರ್ಮಿಕತೆ ಜೊತೆಗೆ ಅವರ ಸಂಘಟನಾ ಮನೋಭಾವನೆಯನ್ನು ಮುಕ್ತ ಕಂಡದಿಂದ ಪ್ರಶಂಸಿಸಿದರು.

ಈ ಸಂದರ್ಭದಲ್ಲಿ ನಾರಾಯಣರಾವ್ ಮಾತನಾಡಿ ಶ್ರೀದೇವಿಯ ಅನುಗ್ರಹ, ಗುರುಗಳ ಅನುಗ್ರಹದ ಮೇರೆಗೆ ಶಂಕರ ಮಠ 8ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದ್ದು, ಹಿರಿಯ ಸ್ವಾಮಿಗಳ 75 ವಜ್ರ ಮಹೋತ್ಸವ ಪ್ರಯುಕ್ತ ಧಾರ್ಮಿಕ ಆಚರಣೆ ಜೊತೆಗೆ ಸಮಾಜ ಸೇವಾ ಕಾರ್ಯಕ್ರಮಗಳನ್ನು ನಡೆಸಲಾಗುವುದು ಎಂದು ಹೇಳಿದರು. ಈ ಸಂದರ್ಭದಲ್ಲಿ ಅಪಾರ ಭಕ್ತಾದಿಗಳು ಉಪಸ್ಥಿತರಿದ್ದರು.

ಪ್ರವಾಸೋದ್ಯಮ ದಿನಾಚರಣೆ: ಗಂಗಾವತಿ ಬಸ್ ನಿಲ್ದಾಣದ ಮಹಿಳಾ ವಿಶ್ರಾಂತಿ ಕೊಠಡಿಯನ್ನು ಐತಿಹಾಸಿಕ ಸ್ಮಾರಕ ಛಾಯಾಚಿತ್ರಗಳೊಂದಿಗೆ ಸಿಂಗಾರ.

ಗಂಗಾವತಿ: ವಿಶ್ವ ಪ್ರವಾಸೋದ್ಯಮ ದಿನದ ಅಂಗವಾಗಿ ಗಂಗಾವತಿ ಚಾರಣ ಬಳಗವು, ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆ ಕೊಪ್ಪಳ ಸಹಯೋಗದಲ್ಲಿ ನಮ್ಮ ಜಿಲ್ಲೆಯಲ್ಲಿರುವ ಐತಿಹಾಸಿಕ ಸ್ಮಾರಕಗಳ ರಕ್ಷಣೆ, ಜಾಗೃತಿ ಮತ್ತು ಪ್ರಚಾರಕ್ಕೆ ಒಂದು ನೂತನ ಹೆಜ್ಜೆ ಇಟ್ಟಿದೆ. ನಗರದ ಬಸ್ ನಿಲ್ದಾಣದಲ್ಲಿರುವ ಮಹಿಳಾ ವಿಶ್ರಾಂತಿ ಕೊಠಡಿಯನ್ನು ವಿವಿಧ ಪ್ರವಾಸಿ ತಾಣಗಳ ಛಾಯಾಚಿತ್ರಗಳಿಂದ ಅಲಂಕರಿಸಿ, ಅದನ್ನು ‘ಪ್ರವಾಸೋದ್ಯಮ ಪೂರಕ ಮಾದರಿ ಕೊಠಡಿ’ಯಾಗಿ ಪರಿವರ್ತಿಸಲಾಯಿತು. ಪ್ರವಾಸಿಗರು ವಿಶ್ರಾಂತಿ ಪಡೆಯುವ ಸ್ಥಳವನ್ನು ಸುಂದರ ಹಾಗೂ ಮಾಹಿತಿ ಪ್ರಧಾನವಾಗಿಸಲು ಈ ವಿಶೇಷ ಕಾರ್ಯಕ್ರಮ ಕೈಗೊಳ್ಳಲಾಯಿತು ಎಂದು ಗಂಗಾವತಿ ಚಾರಣ ಬಳಗದ ಪ್ರಮುಖರಾದ ಡಾ|| ಶಿವಕುಮಾರ ಮಾಲಿಪಾಟೀಲ್ ತಿಳಿಸಿದರು.

ಕಾರ್ಯಕ್ರಮವನ್ನು ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರಾದ ಡಿ. ನಾಗರಾಜ ಉದ್ಘಾಟಿಸಿ ಮಾತನಾಡಿ, ಪ್ರವಾಸೋದ್ಯಮವು ಕೇವಲ ಆರ್ಥಿಕ ಬೆಳವಣಿಗೆಯ ಸಾಧನವಾಗಿರದೇ, ಸಂಸ್ಕೃತಿ, ಇತಿಹಾಸ ಮತ್ತು ಪ್ರಕೃತಿಯ ವೈಭವವನ್ನು ಮುಂದಿನ ತಲೆಮಾರಿಗೆ ಕೊಂಡೊಯ್ಯುವ ಸೇತುವೆಯಾಗಿದೆ ಎಂದರು. ಗಂಗಾವತಿಯಂತಹ ಐತಿಹಾಸಿಕ ಪಟ್ಟಣವು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಬೇಕೆಂದು ಬಯಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಗಂಗಾವತಿ ಘಟಕದ ವ್ಯವಸ್ಥಾಪಕರಾದ ರಾಜಶೇಖರ ಅಣ್ಣಿಗೇರಿ ಅವರು ಮಾತನಾಡಿ, ಸಾರ್ವಜನಿಕ ಸ್ಥಳಗಳ ಸೌಂದರೀಕರಣ ಮತ್ತು ಪ್ರವಾಸೋದ್ಯಮ ಬೆಂಬಲವು ಸಾರಿಗೆ ಇಲಾಖೆಯ ಸಹಕಾರದೊಂದಿಗೆ ಇನ್ನಷ್ಟು ವಿಸ್ತಾರವಾಗಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಇತಿಹಾಸ ತಜ್ಞರು ಹಾಗೂ ಕರ್ನಾಟಕ ಪುಸ್ತಕ ಪ್ರಾಧಿಕಾರದ ಸದಸ್ಯರಾದ ಡಾ. ಶರಣಬಸಪ್ಪ ಕೋಲ್ಕಾರ್ ಮಾತನಾಡಿ, ನಗರಗಳು ಬೆಳೆಯಬೇಕೆಂದರೆ ಸರ್ಕಾರ ಪ್ರವಾಸೋದ್ಯಮಕ್ಕೆ ಒತ್ತುಕೊಟ್ಟು, ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸುವುದರ ಜೊತೆಗೆ ಪ್ರಚಾರಪಡಿಸಬೇಕೆಂದು ಕರೆ ನೀಡಿದರು.ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸಂಚಾರಿ ಠಾಣೆಯ ಆರಕ್ಷಕ ನಿರೀಕ್ಷಕರಾದ ಶ್ರೀಮತಿ ಶಾರದಾ, ಪ್ರೊ.ಎಫ್.ಹೆಚ್. ಚಿತ್ರಗಾರ ಅವರು ಮಾತನಾಡಿ, ಪ್ರವಾಸಿಗರಿಗೆ ಪ್ರೇರಣೆ ನೀಡುವ ಈ ರೀತಿಯ ಕಾರ್ಯಕ್ರಮಗಳು ಸ್ಥಳೀಯರ ಸಹಭಾಗಿತ್ವದಿಂದ ಯಶಸ್ವಿಯಾಗುತ್ತವೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ತಹಶೀಲ್ದಾರರಾದ ಯು. ನಾಗರಾಜ ಹಾಗೂ ಉಪತಹಶಿಲ್ದಾರ ಪ್ರಕಾಶ ಅವರ ಸಹಕಾರದೊಂದಿಗೆ ಅವರ ಸಮ್ಮುಖದಲ್ಲಿಯೇ ತಹಶಿಲ್ದಾರರ ಕಚೇರಿ ಮತ್ತು ಉಪ ನೋಂದಣಿ ಕಚೇರಿಗಳ ಗೋಡೆಗಳ ಮೇಲೆ ಪ್ರವಾಸಿ ತಾಣಗಳ ಸ್ಮಾರಕಗಳ ಪೋಸ್ಟರ್‌ಗಳನ್ನು ಅಳವಡಿಸಲಾಯಿತು. ಇದರಿಂದ ಸಾರ್ವಜನಿಕರಿಗೆ ಪ್ರವಾಸೋದ್ಯಮ ತಾಣಗಳ ಪರಿಚಯ ಹಾಗೂ ಜಾಗೃತಿ ಮೂಡಿಸುವ ಉದ್ದೇಶ ಸಾಧಿಸಲಾಯಿತು.

ಈ ಕಾರ್ಯಕ್ರಮದ ಗಂಗಾವತಿ ಚಾರಣ ಬಳಗದ ಪ್ರಮುಖರಾದ ಪ್ರಹ್ಲಾದ್ ಕುಲಕರ್ಣಿ, ಲಯನ್ಸ್ ಕ್ಲಬ್ ಖಜಾಂಚಿ ಶಿವಪ್ಪ ಗಾಳಿ, ಪ್ರೊ. ಕರಿಗೂಳಿ, ಮಹಮ್ಮದ್ ರಫಿ, ಉಲ್ಲಾಸ್, ರಮೇಶ್ ಗಬ್ಬೂರ್, ಮಹಾಲಕ್ಷ್ಮೀ ಕೇಸರಹಟ್ಟಿ, ಶಾಹೀನ್ ಕೌಸರ್, ಜಗದೀಶ ಪಾಟೀಲ್, ಚನ್ನಬಸವ ಜೇಕಿನ್, ಟಿ. ಆಂಜನೇಯ, ಮಂಜುನಾಥ ಗುಡ್ಲಾನೂರ್, ರಾಜೇಶ ನಾಯಕ, ಚನ್ನಬಸವ ಕೊಟಗಿ, ಅಲೆಮಾರಿ ಬುಡ್ಗಜಂಗಮ ಸಮಾಜದ ಮುಖಂಡ ಕೃಷ್ಣ, ಹರನಾಯಕ, ಚಿದಾನಂದ ಕೀರ್ತಿ, ಸರ್ವೇಶ ವಸ್ತ್ರದ, ಮಂಜುನಾಥ ಸೋನಾರ್ ಹಾಗೂ ಹಲವಾರು ಗಣ್ಯರು ಭಾಗವಹಿಸಿ ಪ್ರವಾಸೋದ್ಯಮ ದಿನಾಚರಣೆಯನ್ನು ಸಾರ್ಥಕಗೊಳಿಸಿದರು.

ಎಸ್.ಎಲ್ ಭೈರಪ್ಪನವರಿಗೆ ಅ.ಭಾ.ಸಾ.ಪ ವತಿಯಿಂದ ನುಡಿನಮನ

ಗಂಗಾವತಿ: ಸೆಪ್ಟೆಂಬರ್-೨೪ ಮಧ್ಯಾಹ್ನ ೨:೩೦ ಗಂಟೆಗೆ ಬೆಂಗಳೂರಲ್ಲಿ ದೈವಾಧೀನರಾದ ಕರುನಾಡಿನ ಹಿರಿಯ ಖ್ಯಾತ ಸಾಹಿತಿ, ಕಾದಂಬರಿಕಾರ, ಪದ್ಮಭೂಷಣ ಶ್ರೀಯುತ ಎಸ್.ಎಲ್ ಭೈರಪ್ಪನವರಿಗೆ ಇಂದು ಸೆಪ್ಟೆಂಬರ್-೨೫ ರಂದು ಅಖಿಲ ಭಾರತೀಯ ಸಾಹಿತ್ಯ ಪರಿಷತ್ತು ವತಿಯಿಂದ ಶ್ರದ್ದಾಂಜಲಿ ಹಾಗೂ ನುಡಿ ನಮನವನ್ನು ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ರಾಜ್ಯ ಕಾರ್ಯಕಾರಣಿ ಸದಸ್ಯರಾದ ಅಶೋಕ್ ಕುಮಾರ್ ರಾಯ್ಕರ್ ಮಾತನಾಡುತ್ತಾ ಒಬ್ಬ ಯುಗ ಪ್ರವರ್ತಕರಂತೆ ಹೊಸ ವೈಚಾರಿಕ ಜಗತ್ತಿನ ಸೃಷ್ಟಿಸಿ ಯುವ ಸಾಹಿತಿಗಳಿಗೆ ಭೈರಪ್ಪನವರು ಪ್ರೇರಣೆಯೆಂದು ಕೊಂಡಾಡಿದರು. ಯುವ ಸಾಹಿತಿಗಳು ಅವರ ಕಾದಂಬರಿ ವಿಮರ್ಶೆ ಹಾಗೂ ಜೀವನಕ್ರಮದಿಂದ ಪ್ರೇರಣೆ ಪಡೆದು ಹೊಸ ಸೃಷ್ಟಿಯ ವೈಚಾರಿಕ ವಲಯವನ್ನು ನಿರ್ಮಿಸಲಿ ಎಂದು ಕರೆ ನೀಡಿದರು.

ಕಾದಂಬರಿಗಳಲ್ಲದೆ ಸಾಹಿತ್ಯ ಮತ್ತು ಪ್ರತೀಕ, ನಾನೇಕೆ ಬರೆಯುತ್ತೇನೆ ಎಂಬ ಕೃತಿಗಳನ್ನು ಭೈರಪ್ಪ ರಚಿಸಿದ್ದಾರೆ ಎಂದು ಕೊಪ್ಪಳ ಜಿಲ್ಲಾ ಕಾರ್ಯದರ್ಶಿ ಶರಣಪ್ಪ ತಳ್ಳಿ ಅಭಿಪ್ರಾಯಪಟ್ಟರು. ಹಿರಿಯ ಉಪನ್ಯಾಸಕರಾದ ಶ್ರೀಯುತ ನಾರಾಯಣ ಕಂದಗಲ್ ಭೈರಪ್ಪನವರು ಓದುಗರ ಹಾಗೂ ವಿಮರ್ಶಕರ ಮನವನ್ನು ಗೆದ್ದವರೆಂದು ಹೇಳಿದರು.

ಬೈರಪ್ಪ ಅವರ ಸಾಧನೆ ನಡೆ-ನುಡಿ ಓದು ಬರಹ ಅನುಕರಣಿಯವೆಂದು ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಬಳ್ಳಾರಿ ವಿಭಾಗದ ಸಂಯೋಜಕರಾದ ಟಿ. ಶ್ರೀಧರ್ ಹೇಳಿದರು.

ಬಡತನದಿಂದ ಬೆಳೆದು ಬಂದು ಜೀವನ ಅನುಭವದಿಂದ ಬರವಣಿಗೆಗೆ ಮೊದಲು ಅವರು ಆಳವಾಗಿ ಅಧ್ಯಯನ ಕೈಗೊಂಡು ಇದಕ್ಕೆ ಅವರ ಕಾದಂಬರಿಗಳು ಉತ್ಕೃಷ್ಟತೆಗೆ ಕಾರಣವೆಂದು ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಗಂಗಾವತಿ ನಗರದ ಉಪಾಧ್ಯಕ್ಷರಾದ ಹಾಗೂ ನಿವೃತ್ತ ಶಿಕ್ಷಕರಾದ ಶ್ರೀ ಪ್ರಕಾಶ್ ಪಾಟೀಲ್ ಅಭಿಪ್ರಾಯಪಟ್ಟರು.

ದೇಶದ ಅತ್ಯಂತ ಉನ್ನತವಾದ ಗೌರವದ ಪದ್ಮಭೂಷಣರ ಗೌರವಕ್ಕೆ ಪಾತ್ರರಾದವರು ಎಂದು ಇತರ ಪ್ರಶಸ್ತಿಗಳ ಗೋಜಿಗೆ ಹೋಗಲಿಲ್ಲ. ಸಾಹಿತ್ಯವನ್ನು ಅವರಂತೆ ಸಮಗ್ರವಾಗಿ ವಿಮರ್ಶೆ ಮಾಡಿದ ಕನ್ನಡ ನಾಡಿನಲ್ಲಿ ಅತಿ ವಿರಳವೆಂದು ಅಖಿಲ ಭಾರತ ಸಾಹಿತ್ಯ ಪರಿಷತ್ತಿನ ಗಂಗಾವತಿ ನಗರದ ಅಧ್ಯಕ್ಷರಾದ ಜಡಿಯಪ್ಪ ಮೆಟ್ರಿ ಹಿರಿಯ ಸಾಹಿತಿ ಭೈರಪ್ಪನವರನ್ನು ಸ್ಮರಿಸಿದರು.

ಗಂಗವತಿ ನಗರ ಉಪಾಧ್ಯಕ್ಷರಾದ ಮಹಾದೇವ್ ಮೋತಿ ಇವರಿಂದ ಶಾಂತಿ ಮಂತ್ರ ಹಾಗೂ ಗಂಗಾವತಿ ನಗರ ಕಾರ್ಯದರ್ಶಿಗಳಾದ ಯಲ್ಲಪ್ಪ ಕಲಾಲ್ ಇವರಿಂದ ವಂದನಾರ್ಪಣೆ ನಡೆಯಿತು.

VISHWAROOPA NEWS BLOG

Infinite

Skip to content ↓